ಅಕ್ರಮ ಸಂಬಂದ ಹಿನ್ನಲೆ-ಪತ್ನಿಯಿಂದ ಪತಿಯ ಕೊಲೆ

ಬೆಂಗಳೂರು, ಮಾ.18-ಅಕ್ರಮ ಸಂಬಂಧಕ್ಕಾಗಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿದ್ದ ಪತ್ನಿ ಹಾಗೂ ಪ್ರಿಯಕರನನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೆಸರಘಟ್ಟದ ದಾಸೇನಹಳ್ಳಿ ಗ್ರಾಮದ ಸುಖಿತಾ (30) ಮತ್ತು ಶ್ರೀನಿವಾಸ (31) ಬಂಧಿತರು.

ಫೆ.26 ರಂದು ಅಶ್ವತ್ಥಪ್ಪ ಎಂಬುವರು ಸೋಲದೇವನಹಳ್ಳಿ ಠಾಣೆಗೆ ತೆರಳಿ ತನ್ನ ಅಣ್ಣನ ಮಗ ಉಮಾಶಂಕರ್ ಅನುಮಾನಾಸ್ಪದವಾಗಿ ಮೃತಪಟ್ಟಿರುವುದಾಗಿ ದೂರು ನೀಡಿದ್ದರು.

ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ನೀಡಿದ ದೂರಿನನ್ವಯ ಸೋಲದೇವನಹಳ್ಳಿ ಪೊಲೀಸರು ತನಿಖೆ ಕೈಗೊಂಡು ಶವ ಪರೀಕ್ಷೆ ಮಾಡಿಸಿ ವೈದ್ಯರ ಸಲಹೆ ಮೇರೆಗೆ ಕಳೇಬರವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

ಆ ವರದಿಯಲ್ಲಿ ಉಮಾಶಂಕರ್ ಸಂಶಯಾಸ್ಪದವಾಗಿ ಮೃತಪಟ್ಟಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸದರಿ ವರದಿ ಆಧರಿಸಿ ತನಿಖಾಧಿಕಾರಿಯವರು ತನಿಖೆ ಚುರುಕುಗೊಳಿಸಿ ಮೃತನ ಪತ್ನಿ ಸುಖಿತಾಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತನ್ನ ಪ್ರಿಯಕರ ಶ್ರೀನಿವಾಸನ ಜೊತೆ ಸೇರಿಕೊಂಡು ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಈ ಪ್ರಕರಣದಲ್ಲಿ ಆರೋಪಿ ಸುಖಿತಾಳನ್ನು ಪೊಲೀಸರು ಹೆಚ್ಚಿನ ವಿಚಾರಣೆ ಮಾಡಿದಾಗ, ತನ್ನ ಪ್ರಿಯಕರನೊಂದಿಗೆ ಸಂಬಂಧವಿರುವುದು ಗಂಡನಿಗೆ ತಿಳಿದಿದ್ದರಿಂದ ಪ್ರಿಯಕರನನ್ನು ತನ್ನ ಮನೆಗೆ ಕರೆಸಿಕೊಂಡು ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾಳೆ.

ಉತ್ತರ ವಿಭಾಗದ ಉಪಪೊಲೀಸ್ ಆಯುಕ್ತ ಶಶಿಕುಮಾರ್ ಮಾರ್ಗದರ್ಶನದಲ್ಲಿ ಯಶವಂತಪುರ ಉಪವಿಭಾಗದ ಎಸಿಪಿ ರವಿಪ್ರಸಾದ್ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ವೆಂಕಟೇಗೌಡ ಹಾಗೂ ಪಿಎಸ್‍ಐ ಸೋಮಶೇಖರ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ