ಈಡುಗಾಯಿ ಒಡೆಯುವ ವಿಚಾರ-ಎರಡು ಗುಂಪುಗಳ ನಡುವೆ ಜಗಳ

ಮೈಸೂರು, ಫೆ.27- ಈಡುಗಾಯಿ ಒಡೆಯುವ ವಿಚಾರಕ್ಕೆ ಎರಡು ಗುಂಪಿನ ನಡುವೆ ನಡೆದ ಜಗಳದಲ್ಲಿ ಯುವಕರ ತಲೆ ಮೇಲೆ ಕಾಯಿ ಒಡೆದಿದ್ದು, ಅವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಂಜನಗೂಡು ತಾಲೂಕಿನ ಘಟ್ಟವಾಡಿ ಗ್ರಾಮದಲ್ಲಿ ನಡೆದಿದೆ.

ಮಾರಮ್ಮದೇವಿ ಹಬ್ಬದ ಪ್ರಯುಕ್ತ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಇತ್ತೀಚೆಗಷ್ಟೇ ನವೀಕರಣಗೊಂಡ ದೇವಾಲಯದಲ್ಲಿ ಹೊಸದಾಗಿ ಅಳವಡಿಸಲಾಗಿದ್ದ ಟೈಲ್ಸ್ ಮೇಲೆ ಈಡುಗಾಯಿ ಒಡೆಯಲು ಮುಂದಾದಾಗ ಇದಕ್ಕೆ ಮತ್ತೊಂದು ಗುಂಪಿನ ಯುವಕರು ತೆಂಗಿನಕಾಯಿ ಒಡೆಯಬಾರದೆಂದು ತಾಕೀತು ಮಾಡಿದ್ದಾರೆ. ಈ ವೇಳೆ ಎರಡೂ ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ತಡೆಯಲು ಬಂದ ಗುಂಪಿನ ಯುವಕರ ತಲೆ ಮೇಲೆ ತೆಂಗಿನ ಕಾಯಿ ಒಡೆದು ಆಕ್ರೋಶ ತೀರಿಸಿಕೊಂಡಿದ್ದಾರೆ.

ಮಹದೇವಸ್ವಾಮಿ ಹಾಗೂ ಮಂಜುನಾಥ್ ಎಂಬುವರ ತಲೆ ಮೇಲೆ ಕಾಯಿ ಒಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದರಿಂದ ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಇದನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ