ವಿಹಾವಾಗಿದ್ದ ಯುವಕ: ಹಳೇ ಪ್ರೇಮವನ್ನು ಮರೆಯಲಾಗದೆ ಪ್ರೇಯಸಿಯೊಂದಿಗೆ ಆತ್ಮಹತ್ಯೆಗೆ ಶರಣು

ತುಮಕೂರು,ಫೆ.22- ಬೇರೊಂದು ಯುವತಿ ಜೊತೆ ವಿವಾಹವಾಗಿದ್ದ ಯುವಕ ತನ್ನ ಹಳೇ ಪ್ರೇಮವನ್ನು ಮರೆಯಲಾಗದೆ ರಾತ್ರಿ ಪ್ರೇಯಸಿಯೊಂದಿಗೆ ಸೈನೆಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಶಿರಾದ ಭುವನಹಳ್ಳಿಯ ನಿವಾಸಿ ಚೇತನ್(27) ಮತ್ತು ಮಾನಂಗಿ ಗ್ರಾಮದ ನಿವೇದಿತಾ(22) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.ಶಿರಾನಗರದ ನಾಯಕರಹಟ್ಟಿಯಲ್ಲಿ ಚಿನ್ನ-ಬೆಳ್ಳಿ ಕೆಲಸ ಮಾಡುತ್ತಿದ್ದ ಚೇತನ್ ಹಾಗೂ ನಿವೇದಿತಾ ಈ ಮೊದಲು ಪ್ರೇಮಿಗಳಾಗಿದ್ದರು.

ತದನಂತರದಲ್ಲಿ ಮದುವೆಗೆ ಮನೆಯವರು ಒಪ್ಪುವುದಿಲ್ಲ ಎಂದು ಹೆದರಿ ಬೇರೆ ಬೇರೆಯಾಗಿದ್ದರೂ ಸಹ ಒಬ್ಬರನ್ನೊಬ್ಬರು ಮರೆತಿರಲಿಲ್ಲ. ಈ ನಡುವೆ ಚೇತನ್‍ಗೆ ಮನೆಯವರು ಒಂದೂವರೆ ತಿಂಗಳ ಹಿಂದಷ್ಟೇ ಬೇರೊಂದು ಯುವತಿ ಜೊತೆ ಮದುವೆ ಮಾಡಿದ್ದರು. ಬೆಂಗಳೂರಿನ ವಿವೇಕನಗರದಲ್ಲಿ ವಾಸವಾಗಿದ್ದ ನಿವೇದಿತಾ ಕಳೆದ ವಾರ ಮಾಗೋಡಿನಲ್ಲಿ ಜಾತ್ರೆ ನಿಮಿತ್ತ ಊರಿಗೆ ಬಂದಿದ್ದರು.

ಈ ಸಂದರ್ಭದಲ್ಲಿ ಚೇತನ್ ಹಾಗೂ ನಿವೇದಿತಾ ಭೇಟಿಯಾಗಿದ್ದಾರೆ. ಪ್ರೇಮ ವೈಫಲ್ಯದಿಂದ ನೊಂದಿದ್ದ ಇವರಿಬ್ಬರೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಅದರಂತೆ ರಾತ್ರಿ ಮನೆಬಿಟ್ಟು ಬಂದು ಭುವನಹಳ್ಳಿಯ ಜಮೀನೊಂದರ ಬಳಿ ಸೈನೆಡ್ ಸೇವಿಸಿಆತ್ಮಹತ್ಯೆಮಾಡಿಕೊಂಡಿದ್ದಾರೆ.

ಇಂದು ಬೆಳಗ್ಗೆ ದಾರಿಹೋಕರು ಇಬ್ಬರ ಶವಗಳನ್ನು ಕಂಡು ತಕ್ಷಣ ಶಿರಾ ಪೊಲೀಸರಿಗೆ ತಿಳಿಸಿದ್ದಾರೆ.

ನಗರ ಠಾಣೆ ಇನ್‍ಸ್ಪೆಕ್ಟರ್ ರಂಗಸ್ವಾಮಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಇಬ್ಬರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸಂಬಂಧಿಕರ ಆಕ್ರಂಧನ:
ಒಂದು ಕಡೆ ಚೇತನ್‍ನನ್ನು ಇತ್ತೀಚೆಗಷ್ಟೇ ಮದುವೆಯಾಗಿದ್ದ ಯುವತಿ ಗೋಳಾಡುತ್ತಿದ್ದರೆ, ಮತ್ತೊಂದು ಕಡೆ ಚೇತನ್ ಹಾಗೂ ನಿವೇದಿತಾ ಪೊಷಕರು ಹಾಗೂ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ