ಜೆಡಿಎಸ್-ಕಾಂಗ್ರೇಸ್ ನಡುವಿನ ಮೈತ್ರಿ ಉತ್ತಮವಾಗಿದೆ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್

ಬೆಂಗಳೂರು, ಫೆ.20- ಕೇವಲ ಹೇಳಿಕೆಗಳನ್ನು ಆಧಾರವಾಗಿಟ್ಟುಕೊಂಡು ರಾಜಕಾರಣ ಮಾಡಲು ಸಾಧ್ಯವಿಲ್ಲ. ಜೆಡಿಎಸ್-ಕಾಂಗ್ರೆಸ್ ನಡುವಿನ ಮೈತ್ರಿ ಉತ್ತಮವಾಗಿದೆ. ಲೋಕಸಭೆ ಚುನಾವಣೆಯನ್ನು ಹೊಂದಾಣಿಕೆಯಿಂದಲೇ ಎದುರಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಶಾಸಕ ಜೆ.ಡಿ.ನಾಯಕ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಸಂದರ್ಭದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜತೆ ನಾನು ಇಂದು ಬೆಳಗ್ಗೆಯೂ ಚರ್ಚೆ ಮಾಡಿದ್ದೇನೆ. ನನ್ನೊಂದಿಗೆ ಸೌಜನ್ಯ ಹಾಗೂ ತಾಳ್ಮೆಯಿಂದಲೇ ಮಾತನಾಡಿದ್ದಾರೆ. ನಮ್ಮ ಮಧ್ಯೆ ಯಾವುದೇ ಗೊಂದಲಗಳಿಲ್ಲ ಎಂದರು.

ನಾವ್ಯಾರೂ ಬೆಗ್ಗರ್ಸ್ ಅಲ್ಲ ಎಂದು ಕುಮಾರಸ್ವಾಮಿ ಖಾರವಾದ ಹೇಳಿಕೆ ನೀಡಿದ ಕುರಿತಂತೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಪತ್ರಕರ್ತರು ಪದೇ ಪದೇ ತೀಕ್ಷ್ಣ ಪ್ರಶ್ನೆಗಳನ್ನು ಕೇಳಿದಾಗ ಆ ರೀತಿ ಉತ್ತರ ನೀಡಿರಬಹುದು. ಹೇಳಿಕೆಗಳನ್ನೇ ಮುಂದಿಟ್ಟುಕೊಂಡು ರಾಜಕಾರಣ ಮಾಡಲು ಸಾಧ್ಯವಿಲ್ಲ. ನಮ್ಮ ಮಧ್ಯೆ ಉತ್ತಮ ಬಾಂಧವ್ಯವಿದೆ. ಈ ಹಿಂದೆ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವ ಷಡ್ಯಂತ್ರ ನಡೆಸಿದಾಗ ಎಲ್ಲರೂ ಒಟ್ಟಾಗಿ ಅದನ್ನು ಎದುರಿಸಿ ಸರ್ಕಾರವನ್ನು ಉಳಿಸಿಕೊಂಡಿದ್ದೇವೆ ಎಂದು ತಿಳಿಸಿದರು.

ಲೋಕಸಭೆ ಚುನಾವಣೆಯ ಕ್ಷೇತ್ರಗಳ ಹಂಚಿಕೆಯ ಸಂಬಂಧ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಜತೆ ಇಂದು ಸಂಜೆ ಅಥವಾ ನಾಳೆ ಮಾತುಕತೆ ನಡೆಸುತ್ತೇನೆ. ಗೋಹಾಟಿ ಪ್ರವಾಸದಲ್ಲಿರುವ ದೇವೇಗೌಡರು ಅಲ್ಲಿಂದ ಬಂದ ನಂತರ ಅವರನ್ನು ಭೇಟಿ ಮಾಡುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಅನಂತ್‍ಕುಮಾರ್ ಹಗಡೆ ವಿರುದ್ಧ ವಾಗ್ದಾಳಿ ನಡೆಸಿದ ದಿನೇಶ್‍ಗುಂಡೂರಾವ್, ಐದು ಬಾರಿ ಉತ್ತರ ಕನ್ನಡ ಭಾಗದಿಂದ ಸಂಸದರಾಗಿ ಆಯ್ಕೆಯಾಗಿರುವ ಅನಂತ್‍ಕುಮಾರ್ ಹೆಗಡೆ ಅವರು ಅಭಿವೃದ್ಧಿ ವಿಷಯದಲ್ಲಿ ಏನನ್ನೂ ಮಾಡಿಲ್ಲ. ಅವರನ್ನು ಬದಲಾಯಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಮೂಲಕ ದೇಶದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗಳಿಸಿ ಸರ್ಕಾರ ರಚಿಸಿ ರಾಹುಲ್‍ಗಾಂಧಿ ಪ್ರಧಾನಿ ಆಗಬೇಕು ಎಂಬುದು ಕಾರ್ಯಕರ್ತರ ಅಭಿಪ್ರಾಯ ಎಂದರು.

ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಾರವೇ ಬಿಜೆಪಿಗೆ ಅಸ್ತ್ರವಾಗಿದೆ. ಅವರಿಗೆ ದಲಿತ, ಹಿಂದುಳಿದ ವರ್ಗಗಳ ಪರ ಕಾಳಜಿ ಇಲ್ಲ. ಅದರಿಂದ ಬೇಸರಗೊಂಡು ಭಟ್ಕಳ ಕ್ಷೇತ್ರದ ಮಾಜಿ ಶಾಸಕ ಜೆ.ಡಿ.ನಾಯಕ್ ಪಕ್ಷ ತೊರೆದು ಕಾಂಗ್ರೆಸ್‍ಗೆ ವಾಪಸ್ ಬಂದಿದ್ದಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ