ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವ ಹಿನ್ನಲೆ ನಗರದಲ್ಲಿ ಬಿಕ್ಷಾಟನೆ ಮಾಡಿದ ಶ್ರೀಗಳು

ತುಮಕೂರು, ಫೆ.14- ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಶ್ರೀ ಮಠದ ಸಂಪ್ರದಾಯದಂತೆ ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ನಗರದಲ್ಲಿ ಭಿಕ್ಷಾಟನೆ ಮಾಡಿದರು.

ಫೆ.26ರಿಂದ ಮಠದಲ್ಲಿ ನಡೆಯಲಿರುವ ಸಿದ್ದಲಿಂಗೇಶ್ವರ ಜಾತ್ರೆಗಾಗಿ ಕಿರಿಯ ಶ್ರೀಗಳು ಮಠದ ಪರಂಪರೆಯಂತೆ ಕಾಲ್ನಡಿಗೆಯಲ್ಲಿ ನಗರದ ವಿವಿಧ ವಾಣಿಜ್ಯ ಸಂಕೀರ್ಣ ಮತ್ತು ಅಂಗಡಿಗಳಿಗೆ ಭೇಟಿ ನೀಡಿ ಭಿಕ್ಷಾಟನೆ ನಡೆಸಿ ಭಕ್ತರಿಂದ ದವಸ-ಧಾನ್ಯವನ್ನು ಸ್ವೀಕರಿಸಿದರು.

ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರು ಸಹ ಸಿದ್ದಲಿಂಗೇಶ್ವರ ಜಾತ್ರೆ ಪ್ರಯುಕ್ತ ಜೋಳಿಗೆ ಹಿಡಿದು ಈ ಹಿಂದೆ ಭಿಕ್ಷಾಟನೆ ಮಾಡುತ್ತಿದ್ದರು. ಅದರಂತೆ ಈ ಪರಂಪರೆಯನ್ನು ಮಠದ ಅಧ್ಯಕ್ಷರಾದ ಕಿರಿಯ ಶ್ರೀಗಳು ಸಹ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು ಶಿವರಾತ್ರಿ ವೇಳೆಯಲ್ಲಿ ಪ್ರತಿ ವರ್ಷ ಸಿದ್ದಲಿಂಗೇಶ್ವರ ಜಾತ್ರೆ ನಡೆಸಿಕೊಂಡು ಬರಲಾಗುತ್ತಿದೆ. ಅದರಂತೆ ಈ ಬಾರಿಯೂ ಸಹ ಜಾತ್ರೆ ನಡೆಸಲಾಗುತ್ತಿದೆ.ಜಾತ್ರೆಗಾಗಿ ಭಕ್ತರ ಬಳಿ ಭಿಕ್ಷಾಟನೆ ಮಾಡಿ ದಾನ ಪಡೆಯುವುದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದ ಪರಂಪರೆ ಎಂದರು.

ಶ್ರೀ ಮಠದಲ್ಲಿ ನಡೆಯುತ್ತಿದ್ದ ಆಚರಣೆಯನ್ನು ಮುಂದುವರೆಸಿಕೊಂಡು ಬಂದಿದ್ದೇನೆ. ಇನ್ನು ನಾಲ್ಕು ದಿನಗಳ ಕಾಲ ಭಿಕ್ಷಾಟನೆ ಮಾಡಲಾಗುವುದು ಎಂದರು.
ಶ್ರೀಗಳ ಜತೆಗೆ ಅರಳೂರು ಕುಮಾರ್, ಮಲ್ಲೇಶ್ ಸೇರಿದಂತೆ ಮಠದ ಶಿಷ್ಯ ವೃಂದ ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ