ಗಣರಾಜ್ಯೋತ್ಸವ ಪರೇಡಿನಲ್ಲಿ ಕರ್ನಾಟಕದಿಂದ ಗಾಂಧೀಜಿ-ಬೆಳಗಾವಿ ಕಾಂಗ್ರೇಸ್ ಅಧಿವೇಶನದ ಸ್ತಬ್ಧಚಿತ್ರ

ಬೆಂಗಳೂರು,ಜ.23- ಈ ಬಾರಿ ಗಣರಾಜ್ಯೋತ್ಸವ ದಿನ ನವದೆಹಲಿಯ ರಾಜಪಥ್‍ನಲ್ಲಿ ನಡೆಯುವ ಪರೇಡ್‍ನಲ್ಲಿ ಕರ್ನಾಟಕದಿಂದ ಮಹಾತ್ಮ ಗಾಂಧೀಜಿ-ಬೆಳಗಾವಿ ಕಾಂಗ್ರೆಸ್ ಅಧಿವೇಶನ ವಿಷಯಾಧಾರಿತ ಸ್ತಬ್ಧಚಿತ್ರ ಸಾಗಲಿದೆ.
ಪರೇಡ್ ನಲ್ಲಿ 17 ರಾಜ್ಯಗಳು ಭಾಗವಹಿಸುತ್ತಿದ್ದು, ಭಾಗವಹಿಸುತ್ತಿರುವ ಎಲ್ಲಾ ರಾಜ್ಯಗಳಿಗೂ ಮಹಾತ್ಮ ಗಾಂಧಿ ವಸ್ತು ವಿಷಯ ಆಧರಿಸಿ ಪ್ರತಿ ರಾಜ್ಯದಲ್ಲಿ ಗಾಂಧಿ ಬಿಟ್ಟು ಹೋಗಿರುವ ನೆನಪುಗಳು ಆಯ್ದು ಸ್ತಬ್ಧ ಚಿತ್ರಗಳನ್ನು ರಚನೆ ಮಾಡಲಾಗುತ್ತಿದೆ.

ಕರ್ನಾಟಕದಿಂದಲೂ ಸ್ತಬ್ದಚಿತ್ರ ಪ್ರದರ್ಶನಕ್ಕೆ ಭರ್ಜರಿ ತಯಾರಿ ನಡೆದಿದೆ. ಸತತ ಹತ್ತು ವರ್ಷಗಳು ರಾಜಪಥ್ ರಸ್ತೆಯಲ್ಲಿ ಕರ್ನಾಟಕದ ತೇರು ಓಡಿಸಲು ಅವಕಾಶ ಸಿಕ್ಕಿದ್ದು ಈ ಬಾರಿಯೂ ರಾಜ್ಯದ ಸಂಸ್ಕೃತಿ ಅನಾವರಣಗೊಳ್ಳಲಿದೆ. 1924ರಲ್ಲಿ ಮೊದಲ ಬಾರಿ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‍ನ 39ನೇ ಬೆಳಗಾವಿ ಅಧಿವೇಶನದ ಕಥಾವಸ್ತುವನ್ನು ಕರ್ನಾಟಕ ಆಯ್ಕೆ ಮಾಡಿದ್ದು, ಕಲಾ ನಿರ್ದೇಶಕ ಶಶಿಧರ್ ಹಡಪಾ ನೇತೃತ್ವದಲ್ಲಿ 50 ಮಂದಿ ಕಲಾವಿದರು ರಚಿಸಿರುವ ರಾಜ್ಯದ ಸ್ತಬ್ಧ ಚಿತ್ರ ಕಣ್ಮನ ಸೆಳೆಯುತ್ತಿದೆ.

ನವದೆಹಲಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ  ಬಗ್ಗೆ ಮಾಹಿತಿ ನೀಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಬಸವರಾಜ್ ಕಂಬಿ ಮಾತನಾಡಿ, ರಕ್ಷಣಾ ಮಂತ್ರಾಲಯವೇ ಮಹಾತ್ಮಗಾಂಧಿಜೀಯವರ 150ನೇ ಜನ್ಮದಿನಚರಣೆ ಅಂಗವಾಗಿ ಈ ಬಾರಿ ಎಲ್ಲಾ ರಾಜ್ಯಗಳಿಗೂ ಮಹಾತ್ಮಗಾಂಧಿಜೀಯವರ ಜೀವನಾಧರಿತ ಸ್ತಬ್ಧಚಿತ್ರದ ಪರಿಕಲ್ಪನೆ ಕಳುಹಿಸುವಂತೆ ಸೂಚಿಸಿತ್ತು. ಇಲಾಖೆಯ ಕಾರ್ಯದರ್ಶಿ ಮತ್ತು ನಿರ್ದೇಶಕರನ್ನೊಳಗೊಂಡ ಸಮಿತಿ ವಿವಿಧ ನಾಲ್ಕು ವಿಷಯಗಳನ್ನು ಒಳಗೊಂಡ ಸ್ತಬ್ಧಚಿತ್ರದ ಮಾದರಿಗಳನ್ನು ರಕ್ಷಣಾ ಮಂತ್ರಾಲಯಕ್ಕೆ ಕಳುಹಿಸಿಕೊಟ್ಟಿತ್ತು. ಅಂತಿಮವಾಗಿ ರಕ್ಷಣಾಮಂತ್ರಾಲಯ ನೇಮಿಸಿದ್ದ ತಜ್ಞರ ಸಮಿತಿ ¿ಮಹಾತ್ಮ ಗಾಂಧೀಜಿ-ಬೆಳಗಾವಿ ಕಾಂಗ್ರೆಸ್ ಅಧಿವೇಶನ ವಿಷಯಾಧಾರಿತ ಸ್ತಬ್ಧಚಿತ್ರವನ್ನು ಆಯ್ಕೆ ಮಾಡಿತು ಎಂದರು.

1924ರ ಡಿ.26 ಮತ್ತು 27ರಂದು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ, ಒಂದು ಐತಿಹಾಸಿಕ ಮಹತ್ವವುಳ್ಳ ಘಟನೆಯಾಗಿದೆ. ಏಕೆಂದರೆ, ಇದು ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ ಏಕೈಕ ಕಾಂಗ್ರೆಸ್ ಮಹಾ ಅಧಿವೇಶನವಾಗಿದೆ. ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ 39ನೇ ಮಹಾಧಿವೇಶನಕ್ಕೆ ಕನ್ನಡ ಜನತೆಯ ಅತ್ಯುತ್ಸಾಹದ ಪ್ರತಿಕ್ರಿಯೆ ಹಾಗೂ ಬೆಂಬಲ ವ್ಯಕ್ತವಾಗಿತ್ತು.

ಕಲಾವಿದ ಶಶಿಧರ ಅಡಪ ಅವರು ಸ್ತಬ್ಧಚಿತ್ರದ ವಿನ್ಯಾಸ ಮಾಡಿದ್ದು, ಇದಕ್ಕಾಗಿ ಪ್ರವೀಣ್ ಡಿ.ರಾವ್ ಅವರು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆಗೆ ಸಂಗೀತ ರಚನೆ ಮಾಡಿದ್ದಾರೆ. ಸ್ತಬ್ಧಚಿತ್ರದ ನಿರ್ಮಾಣಕಾರ್ಯಕ್ಕೆ ಜನವರಿ 5 ರಂದು ಚಾಲನೆ ನೀಡಲಾಗಿತ್ತು. ಬಹುತೇಕ ಸ್ತಬ್ಧಚಿತ್ರದ ಕೆಲಸ ಪೂರ್ಣಗೊಂಡಿದೆ. ಇನ್ನು ಇಂದು ರಾಜಪಥದಲ್ಲಿ ಪೂರ್ವಸಿದ್ಧತಾ ತಾಲೀಮು ನಡೆಯಲಿದ್ದು, ಬಳಿಕ ಕೊನೆಯ ಹಂತದ ಕೆಲಸವನ್ನು ಪೂರ್ಣಗೊಳಿಸಲಾಗುತ್ತದೆ.

ಸ್ತಬ್ಧಚಿತ್ರದ ನಿರ್ಮಾಣದ ಸ್ಥಳೀಯ ಉಸ್ತುವಾರಿ ವಾರ್ತಾಧಿಕಾರಿ ಡಾ.ಮೈಸೂರು ಗಿರೀಶ್ ಮಾತನಾಡಿ, ಗಣರಾಜ್ಯೋತ್ಸವ ಪರೇಡ್‍ನಲ್ಲಿ 13ರಿಂದ 14 ರಾಜ್ಯಗಳ ಸ್ತಬ್ಧಚಿತ್ರಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿ 30 ರಾಜ್ಯಗಳಲ್ಲಿ 14 ರಾಜ್ಯಗಳ ಸ್ತಬ್ಧಚಿತ್ರಗಳು ಮಾತ್ರ ಅಂತಿಮವಾಗಿ ಆಯ್ಕೆಗೊಂಡಿದ್ದವು. ವೈಲ್ಡ್ ಕಾರ್ಡ್ ಮೂಲಕ ಈಶಾನ್ಯ ರಾಜ್ಯದ ಮೂರು ರಾಜ್ಯಗಳಿಗೆ ಅವಕಾಶ ಕಲ್ಪಿಸಲಾಗಿ, ಒಟ್ಟು 17 ರಾಜ್ಯಗಳ ಸ್ತಬ್ಧಚಿತ್ರಗಳು ಈ ಸಾಲಿನ  ಗಣರಾಜ್ಯೋತ್ಸವದ ಪರೇಡ್‍ನ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಭಾಗವಹಿಸುತ್ತಿವೆ. ಅದರಲ್ಲೂ ಕರ್ನಾಟಕ ಸತತ 10 ವರ್ಷಗಳಿಂದ, ಅಂದರೆ 2010ರಿಂದ ಇಲ್ಲಿಯವರೆಗೂ ಆಯ್ಕೆಯಾಗುತ್ತಾ ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಸ್ತಬ್ಧ ಚಿತ್ರದ ವಿಶೇಷತೆ ಏನು?
1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ ಚಿತ್ರಣ ಟ್ಯಾಬ್ಲೊ ನಿರ್ಮಾಣಕ್ಕೆ ಆಯ್ಕೆ ಮಾಡಿದ್ದು ಅಧಿವೇಶನದಲ್ಲಿ ಗಾಂಧಿ ಮಾಡಿದ ಭಾಷಣದ ವೇದಿಕೆ ಮತ್ತು ವೇದಿಕೆಯ ಸುತ್ತ ಬಸವಣ್ಣ ಮತ್ತು ಕೃಷ್ಣರಾಜ ಒಡೆಯರ್ ಫೆÇೀಟೋಗಳು ಇರಲಿದೆ.
ಅಧಿವೇಶನದಲ್ಲಿ ಸರೋಜಿನಿ ನಾಯ್ಡು, ಜವಾಹರ ಲಾಲ್ ನೆಹರು, ಸರ್ದಾರ್ ವಲ್ಲಭಬಾಯ್ ಪಟೇಲರಿಂದ ಧ್ವಜರೋಹಣ, ಸ್ವತಂತ್ರ ಪೂರ್ವ ಮೊಟ್ಟಮೊದಲ ಕಲ್ಪನಾ ಧ್ವಜ ಹಾಗೂ ಬದಲಾವಣೆಗಳ ಚಿತ್ರಣ, ಹಿಂದೂ ಮುಸ್ಲಿಂ ಏಕತೆ, ವಿದೇಶಿ ವಸ್ತುಗಳ ಬಹಿಷ್ಕಾರ, ಖಾದಿಗೆ ಪೆÇ್ರೀ ಅಸ್ಪಶ್ಯತೆ ನಿವಾರಣೆ ಧ್ಯೆಯವಾಕ್ಯಗಳು ಇರಲಿವೆ.

ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಐದು ಬಾರಿ ಬಹುಮಾನ:
ಇನ್ನು ಸ್ತಬ್ಧಚಿತ್ರದ ಕಲಾವಿನ್ಯಾಸಕ ಶಶಿಧರ್ ಅಡಪ ಅವರು, ಮಹಾತ್ಮ ಗಾಂಧೀಜಿ-ಬೆಳಗಾವಿ ಕಾಂಗ್ರೆಸ್ ಅಧಿವೇಶನ ವಿಷಯಾಧಾರಿತ ಸ್ತಬ್ದಚಿತ್ರದಲ್ಲಿ 1924ರಲ್ಲಿ ನಡೆದ ಬೆಳಗಾವಿ ಅಧಿವೇಶನದ ಅಕ್ಷರಶಃ ವೇದಿಕೆಯನ್ನೇ ಸ್ತಬ್ಧಚಿತ್ರದಲ್ಲಿ ಮೂಡಿಸಲಾಗಿದೆ. ಸಂಶೋಧನಾ ವಿಧ್ಯಾರ್ಥಿಯಂತೆ ಪ್ರತಿಯೊಂದು ವಿಷಯಗಳಿಗೂ ಇತಿಹಾಸದ ದಾಖಲೆಗಳನ್ನು ಸಂಗ್ರಹಿಸಿ ರಕ್ಷಣಾ ಇಲಾಖೆಯ ಸ್ತಬ್ಧಚಿತ್ರದ ಆಯ್ಕೆ ಸಮಿತಿಯ ಮುಂದೆ ಪ್ರದರ್ಶಿಸಲಾಯಿತು. ನಮ್ಮ ರಾಷ್ಟ್ರಧ್ವಜದ ನಿರ್ಮಾಣವೇ ರೋಚಕತೆಯಿಂದ ಕೂಡಿದೆ. ರಾಷ್ಟ್ರಧ್ವಜದ ಪರಿಕಲ್ಪನೆ ಮೊದಲ ಬಾರಿಗೆ ಬೆಳಗಾವಿ ಅಧಿವೇಶನದಲ್ಲಿ ರೂಪಗೊಂಡಿತು. ನಮ್ಮ ಪ್ರಸ್ತುತ ರಾಷ್ಟ್ರಧ್ವಜ ಸತತ 16 ವರ್ಷಗಳಲ್ಲಿ ನಿರಂತರ ಬದಲಾವಣೆ ಬಳಿಕ ಅಂತಿಮವಾಗಿ ಕೇಸರಿ-ಬಿಳಿ-ಹಸಿರು ಬಣ್ಣದ ತ್ರಿರಂಗ ರಾಷ್ಟ್ರಧ್ವಜ ಸಿದ್ಧಗೊಂಡಿತು. ಇದನ್ನು ಸಹ ನಮ್ಮ ಸ್ತಬ್ಧಚಿತ್ರದಲ್ಲಿ ಚಿತ್ರಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ