ವಿಶ್ವವಿಖ್ಯಾತ ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ : ಸಂಜೆ 6.30ಕ್ಕೆ ಮಕರ ಜ್ಯೋತಿ. ಗೋಚರಿಸಲಿದೆ

ಶಬರಿಮಲೆ, ಜ.14 (ಪಿಟಿಐ)-ವಿಶ್ವವಿಖ್ಯಾತ ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿಯಿಂದ ಇಂದು ಸಂಜೆ 6.30ಕ್ಕೆ ಮಕರ ಜ್ಯೋತಿ. ಗೋಚರಿಸಲಿದೆ. ಸಹಸ್ರಾರು ಭಕ್ತರು ದಿವ್ಯ ಜ್ಯೋತಿಯನ್ನು ಕಣ್ತುಂಬಿಕೊಳ್ಳಲು ಶಬರಿಗಿರಿಗೆ ಈಗಾಗಲೇ ಆಗಮಿಸಿದ್ದು, ಈ ಕ್ಷಣಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.

ಇಂದು ಸಂಜೆ ವಿಶೇಷ ಮಂಡಲ ಪೂಜೆ ಬಳಿಕ ಮಕರ ವಿಳ್ಳಕ್ಕು(ಮಕರ ಜ್ಯೋತಿ) ದರ್ಶನವಾಗಲಿದೆ. ಇಂದು ಸಂಜೆ 6.30ಕ್ಕೆ ಪವಿತ್ರ ಜ್ಯೋತಿ ದರ್ಶನವಾಗಲಿದೆ ಎಂದು ದೇಗುಲ ಮುಖ್ಯಸ್ಥರು ತಿಳಿಸಿದ್ದಾರೆ.

ಈಗಾಗಲೇ ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಪುದುಚೇರಿ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ಅಯ್ಯಪ್ಪ ಭಕ್ತರು ಪಂಪಾದಿಂದ ಸ್ವಾಮಿ ಸನ್ನಿಧಿವರೆಗೆ ವಾಸ್ತವ್ಯ ಹೂಡಿದ್ದಾರೆ.

ಸಕಲ ಭಕ್ತರಿಗೂ ಮಕರ ಜ್ಯೋತಿ ದರ್ಶನವಾಗುವಂತೆ ಹಾಗೂ ಈ ವಿಶೇಷ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಅಪಾರ ಸಂಖ್ಯೆಯ ಭಕ್ತರು ಸೇರಿರುವುದರಿಂದ ನೂಕುನುಗ್ಗಲು ಮತ್ತು ಕಾಲ್ತುಳಿತ ಸಂಭವಿಸದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಎಲ್ಲ ವರ್ಗದ ಮಹಿಳೆಯರಿಗೆ ಸ್ವಾಮಿ ಸನ್ನಿಧಿ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅವಕಾಶ ನೀಡಿದ ನಂತರ ಕೇರಳ ರಾಜ್ಯಾದ್ಯಂತ ಭುಗಿಲೆದ್ದ ಪ್ರತಿಭಟನೆ ಹಿನ್ನೆಲೆಯಲ್ಲಿ ಈ ಬಾರಿ ಭಕ್ತರ ಸಂಖ್ಯೆ ಸ್ವಲ್ಪ ಪ್ರಮಾಣದಲ್ಲಿ ಇಳಿದಿದೆ. ಆದಾಗ್ಯೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ