ಜ.17ರಂದು ದಕ್ಷಿಣ ಭಾರತ ಎಂಎಸ್ಎಂವಿ ಶೃಂಗಸಭೆ

ಬೆಂಗಳೂರು, ಜ.14- ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ದಕ್ಷಿಣ ಭಾರತ ಎಂಎಸ್‍ಎಂವಿ ಶೃಂಗಸಭೆಯನ್ನು ಇದೇ 17ರಂದು ಬೆಳಗ್ಗೆ 11 ಗಂಟೆಗೆ ಕಾಸಿಯಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಸವರಾಜ್ ಎಸ್.ಜವಳಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೃಂಗಸಭೆಯನ್ನು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಶಿವ ಪ್ರತಾಪ ಶುಕ್ಲ ಉದ್ಘಾಟಿಸಲಿದ್ದು, ಕೇಂದ್ರ ಸಚಿವ ಸದಾನಂದಗೌಡ ಹಾಗೂ ಎಂಎಸ್‍ಎಂಇ ಕೇಂದ್ರ ರಾಜ್ಯ ಸಚಿವ ಗಿರಿರಾಜ ಸಿಂಗ್, ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್, ಲೋಕಸಭಾ ಸದಸ್ಯರಾದ ಮುದ್ದಹನುಮೇಗೌಡ, ಶಾಸಕ ವಿ.ಸೋಮಣ್ಣ ಸೇರಿದಂತೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಎಂಎಸ್‍ಎಂಇ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಸರ್ಕಾರದ ವಿವಿಧ ನೀತಿ, ಕಾನೂನುಗಳು ಮತ್ತು ಆದೇಶಗಳ ಸಮಗ್ರ ಮಾಹಿತಿ ಹಾಗೂ ಕುಂದು-ಕೊರತೆಗಳ ಬಗ್ಗೆ ಸರ್ಕಾರದ ಮುಂದೆ ಸಂಘಟಿತ ಒಕ್ಕೊರಲಿನ ದನಿಯೊಂದಿಗೆ ಉತ್ತಮ ಮೂಲ ಸೌಕರ್ಯ ತಂತ್ರಜ್ಞಾನ, ವ್ಯವಸ್ಥಿತ ಮಾರುಕಟ್ಟೆ ಅಭಿವೃದ್ಧಿ ಕುರಿತಂತೆ ಎಂಎಸ್‍ಎಂವಿ ವ್ಯಾಖ್ಯಾನ ಕುರಿತು ಬದಲಾವಣೆಗೆ ಪ್ರಮುಖ ಸಮಸ್ಯೆಗಳನ್ನು ಒಗ್ಗೂಡಿಸಿ ಪರಿಹಾರೋಪಾಯಗಳನ್ನು ಕೋರಿ ಮನವಿ ಪತ್ರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಗೌರವಾನ್ವಿತ ಸಚಿವರ ಮೂಲಕ ಸಮರ್ಪಿಸಲಾಗುತ್ತದೆ ಎಂದು ತಿಳಿಸಿದರು.

ಶೃಂಗಸಭೆಯಲ್ಲಿ ಸಂವಾದ, ಸಂವಹನ ಮತ್ತು ಪ್ರಸ್ತುತಿಗಳನ್ನು ಪರಿಣತರು ವಿವಿಧ ವಿಷಯಗಳ ಕುರಿತು ಮಂಡಿಸಲಿದ್ದಾರೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ