ಕ್ಷುಲ್ಲಕ ವಿಚಾರಕ್ಕೆ ಜಗಳ ಹೋಟೇಲ್ ಮೇಲೆ ಕಲ್ಲು ತೂರಾಟ

ಬೆಂಗಳೂರು, ಜ.13- ಬೈಕ್ ಟಚ್ ಆದ ಕ್ಷುಲ್ಲಕ ವಿಷಯಕ್ಕೆ ಬನ್ನೇರುಘಟ್ಟ ರಸ್ತೆಯ ಎಂಪೈರ್ ಹೊಟೇಲ್ ಸಿಬ್ಬಂದಿ ಹಾಗೂ ಸ್ವಿಗ್ಗಿ ಡೆಲಿವರಿ ಬಾಯ್ ನಡುವೆ ಜಗಳ ನಡೆದು ಹೊಟೇಲ್ ಮೇಲೆ ಕಲ್ಲು ತೂರಾಟ ನಡೆಸಿ ಗಾಜು ಪುಡಿಪುಡಿ ಮಾಡಿರುವ ಘಟನೆ ತಡರಾತ್ರಿ ನಡೆದಿದೆ.

ಎಂಪೈರ್ ಹೊಟೇಲ್ ನೌಕರ ಫಾರೂಕ್ ಬೈಕ್‍ನಲ್ಲಿ ಬಂದು ನಿಲ್ಲಿಸುವ ಸಂದರ್ಭದಲ್ಲಿ , ಅದೇ ಸಮಯಕ್ಕೆ ಸ್ವಿಗ್ಗಿ ಡೆಲಿವರಿ ಬಾಯ್ ನದೀಮ್ ತನ್ನ ಗಾಡಿ ತಂದು ನಿಲ್ಲಿಸುವಾಗ ಟಚ್ ಆಗಿದೆ. ಆಗ ಇಬ್ಬರ ನಡುವೆ ಜಗಳವಾಗಿದೆ.

ರಾತ್ರಿ 8.30ರ ಸುಮಾರಿನಲ್ಲಿ ಎಂಪೈರ್ ಸಿಬ್ಬಂದಿಗಳು ನದೀಮ್ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ 9.30ರಲ್ಲಿ ನದೀಮ್ ತನ್ನ ಹುಡುಗರನ್ನು ಹೊಟೇಲ್ ಬಳಿ ಕರೆದುಕೊಂಡು ಬಂದು ಫಾರುಕ್ ಮೇಲೆ ಹಲ್ಲೆ ನಡೆಸಿ ಹೋಗಿದ್ದಾರೆ.

ಅಷ್ಟಕ್ಕೇ ಸುಮ್ಮನಾಗದೆ ರಾತ್ರಿ 12.30ರ ಸುಮಾರಿಗೆ ಸ್ವಿಗ್ಗಿ ಹುಡುಗರು ಬಂದು ಎಂಪೈರ್ ಹೊಟೇಲ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಹೊಟೇಲ್ ಮುಂಭಾಗದ ಗಾಜು ಪುಡಿಪುಡಿಯಾಗಿದೆ.ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೈಕೋ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಹಲವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ