10 ರೂ. ನೋಟು ತೋರಿಸಿ ವ್ಯಕ್ತಿಯ ಗಮನ ಬೇರೆಡೆಗೆ ಸೆಳೆದು ಹಣವಿದ್ದ ಬೈಕ್ ಸಮೇತ ಪರಾರಿಯಾದ ಇಬ್ಬರು ದರೋಡೆಕೋರರು

ಬೆಂಗಳೂರು,ಜ.8- ಬ್ಯಾಂಕ್‍ನಿಂದ ಹಣ ಡ್ರಾ ಮಾಡಿಕೊಂಡು ಹೊರಬಂದ ವ್ಯಕ್ತಿಗೆ 10 ರೂ. ನೋಟು ತೋರಿಸಿ ಗಮನಸೆಳೆದ ಇಬ್ಬರು ದರೋಡೆಕೋರರು, 50 ಸಾವಿರ ಹಣವಿದ್ದ ಬೈಕ್ ಸಮೇತ ಪರಾರಿಯಾಗಿರುವ ಘಟನೆ ಎಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಂಗಮ್ಮನಪಾಳ್ಯದ ನಿವಾಸಿ ಮಲ್ಲಿಕಾರ್ಜುನ ಎಂಬುವರು ನಿನ್ನೆ  ಮಧ್ಯಾಹ್ನ 3 ಗಂಟೆಯಲ್ಲಿ ಮಂಗಮ್ಮನಪಾಳ್ಯ ಮುಖ್ಯರಸ್ತೆಯಲ್ಲಿರುವ ಕೆನರಾ ಬ್ಯಾಂಕ್‍ನಲ್ಲಿ 50 ಸಾವಿರ ಹಣವನ್ನು ಡ್ರಾ ಮಾಡಿದ್ದಾರೆ.

ಈ ಹಣವನ್ನು ಬ್ಯಾಗ್‍ನಲ್ಲಿಟ್ಟುಕೊಂಡು ಬ್ಯಾಂಕ್ ಹೊರಗೆ ನಿಲ್ಲಿಸಿದ್ದ  ತಮ್ಮ ಬೈಕ್‍ನಲ್ಲಿಟ್ಟು ಮಲ್ಲಿಕಾರ್ಜುನ್ ಅವರು ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ,  ಅಲ್ಲೇ ನಿಂತಿದ್ದ  ವ್ಯಕ್ತಿಯೊಬ್ಬ 10 ರೂ. ನೋಟನ್ನು ಕೆಳಗೆ ಬಿಳಿಸಿ ನಿಮ್ಮ ಹಣ ಬಿದ್ದಿದೆ ಎಂದು ಅವರ ಗಮನ ಸೆಳೆದಿದ್ದಾನೆ.

ಈ ವೇಳೆ  ಬೈಕ್‍ನ್ನು ಬಿಟ್ಟು ನೋಟನ್ನು ತೆಗೆದುಕೊಳ್ಳಲು ಮುಂದಾದಾಗ ಮತ್ತೊಬ್ಬ ಇವರ ಹಣವಿದ್ದ ಬೈಕ್‍ನ್ನು ಚಾಲನೆ ಮಾಡುತ್ತಿದ್ದಂತೆ, ಹಣ ಬೀಳಿಸಿದ    ವ್ಯಕ್ತಿ ಬೈಕ್ ಏರಿ ಇಬ್ಬರೂ ಪರಾರಿಯಾಗಿದ್ದಾರೆ.

ಮಲ್ಲಿಕಾರ್ಜುನ್ ಸಹಾಯಕ್ಕಾಗಿ ಕೂಗಿಕೊಳ್ಳುವಷ್ಟರಲ್ಲಿ ದರೋಡೆಕೋರರಿಬ್ಬರು  ಕಣ್ಮರೆಯಾಗಿದ್ದರು. ಈ ಸಂಬಂಧ ಎಚ್‍ಎಸ್‍ಆರ್ ಲೇಔಟ್ ಠಾಣೆಗೆ ಮಲ್ಲಿಕಾರ್ಜುನ್ ಅವರು ದೂರು ನೀಡಿದ್ದಾರೆ.

ದರೋಡೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದರೋಡೆಕೋರರ ಪತ್ತೆಗೆ ಶೋಧ  ನಡೆಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ