ಇಂದು ಐಟಿ ಕಚೇರಿಗೆ ಭೇಟಿ ನೀಡಿ ವಿಚಾರಣೆಗೆ ಹಾಜರಾದ ನಟ ಪುನೀತ್ ರಾಜ್ ಕುಮಾರ್ ಮತ್ತು ನಿರ್ಮಾಪಕ ಮನೋಹರ್

ಬೆಂಗಳೂರು,ಜ.7- ಪವರ್ ಸ್ಟಾರ್ ಪುನೀತ್‍ರಾಜ್‍ಕುಮಾರ್ ಹಾಗೂ ನಿರ್ಮಾಪಕ ಮನೋಹರ್ ಅವರು ಇಂದು ಐಟಿ ಕಚೇರಿಗೆ ಭೇಟಿ ನೀಡಿ ವಿಚಾರಣೆಗೆ ಹಾಜರಾಗಿದ್ದಾರೆ.

ಇಂದು ಮಧ್ಯಾಹ್ನ ಏಕಾಂಗಿಯಾಗಿ ಪುನೀತ್ ಅವರು ತಮ್ಮ ಸದಾಶಿವನಗರ ನಿವಾಸದಿಂದ ಕ್ವೀನ್ಸ್ ರಸ್ತೆಯ ಐಟಿ ಕಚೇರಿಗೆ ಆಗಮಿಸಿದ್ದರೆ, ಇದಕ್ಕೆ ಮುಂಚೆಯೇ ವಿಲನ್ ಚಿತ್ರದ ನಿರ್ಮಾಪಕ ಮನೋಹರ್ ಕೂಡ ಆಗಮಿಸಿದ್ದರು.

ಇತ್ತೀಚೆಗೆ ಇವರ ನಿವಾಸ ಹಾಗೂ ಕಚೇರಿಗಳ ಮೇಲೆ ಐಟಿ ದಾಳಿ ನಡೆಸಿದ್ದಾಗ ಕೆಲವು ಪ್ರಮುಖ ದಾಖಲೆಗಳು ಪತ್ತೆಯಾಗಿದ್ದವು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವ ಸಲುವಾಗಿ ನೋಟಿಸ್ ಜಾರಿಯಾಗಿತ್ತು.

ಅದರಂತೆ ಇಂದು ಈ ಇಬ್ಬರು ವಿಚಾರಣೆಗೆ ಹಾಜರಾಗಿದ್ದು, ಉಳಿದಂತೆ ಯಶ್, ಶಿವರಾಜ್‍ಕುಮಾರ್, ಸುದೀಪ್, ವಿಜಯ್ ಕಿರಂಗದೂರು ಹಾಗೂ ಸಿ.ಆರ್.ಮನೋಹರ್ ಅವರು ಈ ವಾರದಲ್ಲಿ ಅಧಿಕಾರಿಗಳ ಮುಂದೆ ಹಾಜರಾಗುವ ಸಾಧ್ಯತೆ ಇದೆ.
ಸುಮಾರು ಮೂರು ತಾಸಿಗೂ ಹೆಚ್ಚು ಕಾಲ ಪುನೀತ್ ಹಾಗೂ ಮನೋಹರ್ ಅವರನ್ನು ಪ್ರತ್ಯೇಕವಾಗಿ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಕೆಲವು ಆಸ್ತಿ ಸಂಪಾದನೆ, ಹೂಡಿಕೆ, ಚಿತ್ರಗಳಲ್ಲಿ, ರಿಯಾಲಿಟಿ ಶೋ, ಜಾಹಿರಾತು, ಮಾಡಲಿಂಗ್‍ಗಳಲ್ಲಿ ಪಡೆದ ಸಂಭಾವನೆ ವಿವರದ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ