ಎರಡು ಮನೆಗಳ ಬೀಗ ಒಡೆದ ಕಳ್ಳರು: ವಜ್ರ ಹಾಗೂ ಚಿನ್ನದ ಆಭರಣ ಕದ್ದು ಪರಾರಿ

ಬೆಂಗಳೂರು, ಜ.3- ನಗರದಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಕಡೆ ಮನೆಕಳ್ಳತನ ನಡೆಯುತ್ತಲೇ ಇದ್ದು, ನಿನ್ನೆ ಎರಡು ಮನೆಗಳ ಬೀಗ ಒಡೆದು ಕಳ್ಳರು ಲಕ್ಷಾಂತರ ಮೌಲ್ಯದ ವಜ್ರ ಹಾಗೂ ಚಿನ್ನದ ಆಭರಣವನ್ನು ಕಳ್ಳತನ ಮಾಡಿದ್ದಾರೆ.

ಜೆ.ಪಿ.ನಗರ:
ಜೆ.ಪಿ.ನಗರ 2ನೇ ಹಂತದ 15ನೇ ಕ್ರಾಸ್, 19ನೇ ಮುಖ್ಯರಸ್ತೆ ನಿವಾಸಿ ಪುನೀತ್‍ಗುಪ್ತಾ ಎಂಬುವರ ಮನೆಯ ಬೀಗ ಒಡೆದು ಒಳನುಗ್ಗಿದ ಚೋರರು 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ವಜ್ರವನ್ನು ದೋಚಿದ್ದಾರೆ.

ಎರಡು ದಿನದ ಹಿಂದೆ ಪುನೀತ್ ಗುಪ್ತಾ ಅವರ ಕುಟುಂಬಗಳು ಊರಿಗೆ ತೆರಳಿದ್ದಾಗ ಈ ಕಳ್ಳತನ ನಡೆದಿದೆ. ಮನೆ ಕೆಲಸದವರ ಮೇಲೆ ಅನುಮಾನ ವ್ಯಕ್ತಪಡಿಸಿ ಪುನೀತ್‍ಗುಪ್ತ ಅವರು ಜೆ.ಪಿ.ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಜೆ.ಪಿ.ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನ್ಯೂ ತಿಪ್ಪಸಂದ್ರ:

ನ್ಯೂ ತಿಪ್ಪಸಂದ್ರದ ಹನುಮಂತಪ್ಪ ರಸ್ತೆ ನಿವಾಸಿ ಜಾನಕಿ ಎಂಬುವರ ಮನೆಯ ಬೀಗ ಒಡೆದು ಒಳನುಗ್ಗಿದ ಚೋರರು ಬೀರುವನ್ನು ಮೀಟಿ ಅದರಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಕೈಗೆ ಸಿಕ್ಕಿದ 300 ಗ್ರಾಂ ಚಿನ್ನಾಭರಣವನ್ನು ಕದೊಯ್ದಿರುವ ಘಟನೆ ನಡೆದಿದೆ. ಈ ಸಂಬಂಧ ಜಾನಕಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಮನೆ ಕೆಲಸಕ್ಕೆ ಬರುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿರುವ ಹಿನ್ನೆಲೆಯಲ್ಲಿ ತನಿಖೆ ಮುಂದುವರೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ