9 ದಿನದ ಅಜ್ಞಾತವಾಸದ ಬಳಿಕ ಕೊನೆಗೂ ಪ್ರತ್ಯಕ್ಷರಾದ ರಮೇಶ್​ ಜಾರಕಿಹೊಳಿ, ತಣ್ಣಗಾಯ್ತಾ ಸಿಟ್ಟು?

ಬೆಳಗಾವಿ : ಸಚಿವ ಸಂಪುಟದಿಂದ ಕೈ ಬಿಟ್ಟ ಹಿನ್ನಲೆ ಪಕ್ಷದ ವಿರುದ್ಧ ಮುನಿಸಿಕೊಂಡಿದ್ದ ರಮೇಶ್​ ಜಾರಕಿಹೊಳಿ ಯಾರ ಸಂಪರ್ಕಕ್ಕೂ ಸಿಗದಂತೆ ನಾಪತ್ತೆಯಾಗಿದ್ದರು. ಅವರ ಅಣ್ಣ ಸತೀಶ್​ ಜಾರಕಿಹೊಳಿ ಸೇರಿದಂತೆ ಅನೇಕರು ಅವರ ಸಂಪರ್ಕಕ್ಕೆ ಯತ್ನಿಸಿದ್ದರು ಅವರು ಸಿಕ್ಕಿರಲಿಲ್ಲ. ಅವರು ಇಂದು ತಮ್ಮ ಮನೆಯಲ್ಲಿ ದಿಢೀರ್​ ಪ್ರತ್ಯಕ್ಷರಾಗಿದ್ದಾರೆ.

ಕಳೆದ 9 ದಿನಗಳಿಂದ ನಿಗೂಢ ನಡೆ ಕಾಯ್ದುಕೊಂಡಿದ್ದ ರಮೇಶ್​ ಎಲ್ಲಿದ್ದಾರೆ. ಏನು ಮಾಡುತ್ತಿದ್ದಾರೆ ಎಂಬ ಯಾವ ಮಾಹಿತಿ ಕೂಡ ಯಾರಿಗೂ ಇರಲಿಲ್ಲ. ಮೂಲಗಳ ಪ್ರಕಾರ ಅವರು ಮುಂಬೈನಿಂದ ದೆಹಲಿಗೆ ತೆರಳಿದ್ದರು ಎನ್ನಲಾಗಿದೆ. ಅವರು ಇಂದು ಮುಂಜಾನೆ ಗೋಕಾಕ್​ನ ತಮ್ಮ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಅವರು ಮನೆಯಿಂದ ಹೊರ ಹೋಗುತ್ತಿರುವುದು ಕಂಡು ಬಂದಿದೆ.  ಗೋಕಾಕ್​ನಿಂದ ಬೆಳಗಾವಿಗೆ ಅವರು ಬರುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.

ರಮೇಶ್​ ಜಾರಕಿಹೊಳಿ ದೆಹಲಿಯಲ್ಲಿಯೇ ಇದ್ದುದ್ದರಿಂದ ಅಲ್ಲಿ ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದಾರೆ. ಕಮಲ ಪಾಳಯದ ಹಿರಿಯ ನಾಯಕರು ಕೂಡ ಸದ್ದಿಲ್ಲದಂತೆ ಬಂಡಾಯ ಸಾರಿದ್ದ ಮಾಜಿ ಸಚಿವರಿಗೆ ಪಕ್ಷಕ್ಕೆ ಆಹ್ವಾನಿಸಿತ್ತು ಎಂಬ ಸುದ್ದಿಗಳು ಕೂಡ ಹಬ್ಬಿದ್ದವು.

ಈ ಎಲ್ಲ ಅಂತೆ ಕಂತೆ ಹಾಗೂ ಸಚಿವ ಸ್ಥಾನದಿಂದ ಕೈ ಬಿಟ್ಟಿದ ಹಿನ್ನಲೆ ನಾಯಕರ ವಿರುದ್ಧ ನಾಯಕರ ಸಂಪರ್ಕಕ್ಕೆ ಸಿಗದೆ ತಮ್ಮ ನಿಲುವನ್ನು ಗೌಪ್ಯವಾಗಿಟ್ಟಿದ್ದ ರಮೇಶ್​ ಶೀಘ್ರದಲ್ಲೇ  ಇದಕ್ಕೆಲ್ಲಾ ಅಂತಿಮ ತೆರೆ ಎಳೆಯಬಹುದು ಎನ್ನಲಾಗಿದೆ.

ಪಕ್ಷದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ರಮೇಶ್​ ಸಿಟ್ಟು 9 ದಿನಗಳ ನಂತರ ತಣ್ಣಗಾಯಿತಾ ಎಂಬ ಪ್ರಶ್ನೆ ಕೂಡ ಮೂಡಿದೆ.  ಗೋಕಾಕ್​ನಿಂದ ಬೆಳಗಾವಿಗೆ ಬರಲಿರುವ ಅವರು ತಮ್ಮ ನಿರ್ಧಾರದ ಕುರಿತು ವರಿಷ್ಠರೊಂದಿಗೆ ಮಾತುಕತೆ ನಡೆಸಿ, ಮುಂದಿನ ತಮ್ಮ ನಡೆ ಏನು ಎಂಬ ನಿರ್ಧಾರ ಪ್ರಕಟಿಸುವ ನಿರೀಕ್ಷೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ