ಆದಷ್ಟು ಬೇಗ ನಟ ವಿಷ್ಣು ಸ್ಮಾರಕ ನಿರ್ಮಾಣವಾಗಬೇಕು ಎಂದು ಹೇಳಿದ ಭಾರತಿ ವಿಷ್ಣುವರ್ಧನ್

ಬೆಂಗಳೂರು, ಡಿ.30- ವಿಷ್ಣು ಸ್ಮಾರಕ ನಿರ್ಮಾಣವಾಗುವವರೆಗೂ ಏನನ್ನೂ ಮಾತನಾಡುವುದಿಲ್ಲ. ಆದಷ್ಟು ಬೇಗ ಸ್ಮಾರಕ ನಿರ್ಮಾಣವಾಗಬೇಕು.ಅಭಿಮಾನಿಗಳು ಸಹ ಇದಕ್ಕಾಗಿ ಕಾಯುತ್ತಿದ್ದಾರೆ ಎಂದು ಭಾರತಿ ವಿಷ್ಣುವರ್ಧನ್ ಹೇಳಿದರು.

ವಿಷ್ಣುವರ್ಧನ್ ಅವರ 9ನೆ ಪುಣ್ಯತಿಥಿ ಸ್ಮರಣೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಮಾರಕ ನಿರ್ಮಾಣ ಸಂಬಂಧ ನಾವು ಈಗಾಗಲೇ ಹೇಳುವುದನ್ನೆಲ್ಲ ಹೇಳಿಯಾಗಿದೆ.ಪದೇ ಪದೇ ಅದನ್ನೇ ಹೇಳುವುದು ಬೇಡ.ವಿಷ್ಣು ಸ್ಮಾರಕವಾಗಬೇಕು.ಅದು ನಮ್ಮ ಹಾಗೂ ಅಭಿಮಾನಿಗಳ ಆಶಯ.ಅದು ಆಗುವವರೆಗೆ ನಾನು ಹೆಚ್ಚು ಮಾತನಾಡುವುದಿಲ್ಲ ಎಂದರು.

ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಮಾತನಾಡಿ, ವಿಷ್ಣು ಸ್ಮಾರಕ ನಿರ್ಮಾಣದ ಬಗ್ಗೆ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ.ಪ್ರಧಾನ ಕಾರ್ಯದರ್ಶಿಯವರು ಈ ಬಗ್ಗೆ ಸಭೆ ನಡೆಸಿದ್ದಾರೆ.ಜನವರಿಯಲ್ಲಿ ಸ್ಮಾರಕ ನಿರ್ಮಾಣದ ಬಗ್ಗೆ ನಿರ್ಧಾರ ಕೈಗೊಳ್ಳುವ ಸ್ಪಷ್ಟನೆ ನೀಡಿದ್ದಾರೆ. ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಆಗಲಿದೆ ಎಂದು ಹೇಳಿದರು.

ಅಭಿಮಾನ್ ಸ್ಟುಡಿಯೋದಲ್ಲಿ ಸಮಾಧಿ ಹಾಗೆಯೇ ಇರುತ್ತದೆ.ಅಲ್ಲಿ ಸ್ಮಾರಕ ನಿರ್ಮಾಣ ಮಾಡುವ ಸಂಬಂಧ ಕೆಲವು ಸಮಸ್ಯೆಗಳಿವೆ. ಹಾಗಾಗಿ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ನಿರ್ಧರಿಸಿದ್ದೇವೆ ಎಂದು ಅನಿರುದ್ಧ್ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ