ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಕೆಪಿಸಿಸಿ ಕಾರ್ಯದರ್ಶಿ ಡಾ.ಆನಂದ್ ಕುಮಾರ್

ಬೆಂಗಳೂರು, ಡಿ.29-ದಕ್ಷ, ಪ್ರಾಮಾಣಿಕ, ಹಿರಿಯ ಐಪಿಎಸ್ ಅಧಿಕಾರಿ ಮಧುಕರ್‍ಶೆಟ್ಟಿ ಅವರ ಅಕಾಲಿಕ ನಿಧನಕ್ಕೆ ಕೆಪಿಸಿಸಿ ಕಾರ್ಯದರ್ಶಿ ಡಾ.ಆನಂದ್‍ಕುಮಾರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಲೋಕಾಯುಕ್ತ ಸಂಸ್ಥೆಗೆ ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡು ಕೆಲಸ ಮಾಡಿದ್ದು ಸ್ಮರಣೀಯ.ಅವರ ಅಧಿಕಾರಾವಧಿಯಲ್ಲಿ ಭ್ರಷ್ಟರಿಗೆ ಸಿಂಹ ಸ್ವಪ್ನವಾಗಿದ್ದರು.

ಮಧುಕರ್‍ಶೆಟ್ಟಿ ದಕ್ಷ, ಪ್ರಾಮಾಣಿಕ ಹಾಗೂ ಮಾನವೀಯ ಗುಣವುಳ್ಳ ಅಧಿಕಾರಿಯಾಗಿದ್ದರು.ಆಡಳಿತಕ್ಕೆ ಗೊಡ್ಡು ಸಲಾಮ್ ಹೊಡೆಯದೆ ಕಾನೂನನ್ನು ಪರಿಪಾಲನೆ ಮಾಡಿ ಹೆಸರು ಗಳಿಸಿದ್ದರು. ಕರ್ತವ್ಯ ಪರತೆ, ದಕ್ಷತೆ, ಸಾಮಾಜಿಕ ಬದ್ಧತೆ, ಶಿಸ್ತಿನ ಪೊಲೀಸ್ ಕೆಲಸ, ಅಪರಾಧಿಗಳನ್ನು ಹೆಡೆಮುರಿ ಕಟ್ಟುವುದರಲ್ಲಿ ಅವರ ಗುಂಡಿಗೆ ಮೆಚ್ಚುವಂತಹದ್ದು. ಮಧುಕರ್‍ಶೆಟ್ಟಿ ಅವರಲ್ಲಿ ಒಬ್ಬ ಉತ್ತಮ ಸುಧಾರಕ ಕಾಣುತ್ತಿದ್ದರು.ಎಲ್ಲದರಲ್ಲೂ ಪರಿವರ್ತನೆ ಮಾಡಬೇಕೆಂಬ ತುಡಿತ ಅವರಲ್ಲಿತ್ತು. ಲೋಕಾಯುಕ್ತ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಯಾವುದಕ್ಕೂ ಜಗ್ಗದೆ ಸಚಿವರು, ಶಾಸಕರೆಂದು ಹಿಂದೆ-ಮುಂದೆ ನೋಡದೆ ಕಾನೂನು ಪರಿಪಾಲನೆ ಮಾಡಿ ಹೆಸರು ಗಳಿಸಿದ್ದರು.

ಇಂತಹ ಅಧಿಕಾರಿ ನಮ್ಮ ರಾಜ್ಯದವರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ.ಇವರ ಅಕಾಲಿಕ ಮರಣ ಅತ್ಯಂತ ದುಃಖ ತರಿಸಿದೆ.ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ