ಪ್ರತಿಜ್ಞೆ ಉಳಿಸಿಕೊಳ್ಳಲು 15 ವರ್ಷ ‘ಬೂಟು’ ಧರಿಸದ ವ್ಯಕ್ತಿ; ಆತನ ಪ್ರತಿಜ್ಞೆ ಏನು ಗೊತ್ತಾ?

ಭೋಪಾಲ್ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುವವರೆಗೂ ಬೂಟು ಧರಿಸುವುದಿಲ್ಲ ಎಂದು 40 ವರ್ಷದ ಓರ್ವ ಕಾರ್ಯಕರ್ತ 2003 ರಲ್ಲಿ ಪ್ರತಿಜ್ಞೆ ಮಾಡಿದ್ದರು. ಈ ಕಾರ್ಯಕರ್ತ 15 ವರ್ಷಗಳ ಬಳಿಕ ಮುಖ್ಯಮಂತ್ರಿ ಕಮಲ್ ನಾಥ್ ಉಪಸ್ಥಿತಿಯಲ್ಲಿ ಬುಧವಾರ ‘ಬೂಟು’ ಧರಿಸಿದ್ದಾರೆ.

ಈ ಬಗ್ಗೆ ತಮ್ಮ ಟ್ವೀಟ್ ಮಾಡಿರುವ ಕಮಲ್ ನಾಥ್, “ಇಂದು ರಾಜಘಡ ಕಾರ್ಯಕರ್ತ ಶ್ರೀ ದುರ್ಗಾಲಾಲ್ ಕಿರಾರ್ ಅವರು ಇಂದು ‘ಬೂಟು’ ಧರಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುವವರೆಗೂ ತಾವು ಬೂಟು ಧರಿಸುವುದಿಲ್ಲ ಎಂದು ಅವರು ಪ್ರತಿಜ್ಞೆ ಮಾಡಿದ್ದರು. ಇಂತಹ ಕಾರ್ಯಕರ್ತರಿಗೆ ನನ್ನ ಸಲಾಂ” ಎಂದು ಬರೆದಿದ್ದಾರೆ.

ಈ ಸಂದರ್ಭದಲ್ಲಿ ಸಿಎಂ ಕಮಲ್ ನಾಥ್ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿರುವುದನ್ನು ಫೋಟೋದಲ್ಲಿ ಕಾಣಬಹುದು.

ರಾಜ್ಗಢದಿಂದ 20 ಕಿ.ಮೀ ದೂರದಲ್ಲಿರುವ ಲಿಂಬೊಡಾ ಗ್ರಾಮದ ನಿವಾಸಿ ದುರ್ಗಾ ಲಾಲ್ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರ ಬೆಂಬಲಿಗರಾಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರರು ತಿಳಿಸಿದ್ದಾರೆ. 2003 ರಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುವವರೆಗೂ ಅವರು ಬೂಟುಗಳನ್ನು ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಅದರಂತೆ ಅವರು ಸತತ 15 ವರ್ಷ ಕಾಲಿಗೆ ಬೂಟು ಧರಿಸಿರಲಿಲ್ಲ ಎಂದು ಅವರು ಹೇಳಿದರು.

ಡಿಸೆಂಬರ್ 17 ರಂದು ಕಮಲ್ ನಾಥ್ ರಾಜ್ಯದ 18 ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 15 ವರ್ಷಗಳ ನಂತರ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಯಿತು.

ಈಗ 15 ವರ್ಷಗಳ ನಂತರ, ಮುಖ್ಯಮಂತ್ರಿ ಕಮಲ್ ನಾಥ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ, ದುರ್ಗಾ ಲಾಲ್ ಅವರ ಪ್ರತಿಜ್ಞೆ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಕಮಲ್ ನಾಥ್ ಅವರ ನಿವಾಸದಲ್ಲಿ ಅವರ ಉಪಸ್ಥಿತಿಯಲ್ಲಿ ಹೊಸ ಶೂಗಳನ್ನು ಧರಿಸಿದರು.

1993 ರಿಂದ 2003 ರವರೆಗೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ದಿಗ್ವಿಜಯ್ ಸಿಂಗ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. 2003 ರಲ್ಲಿ ಕಾಂಗ್ರೆಸ್ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿತು ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರೂಪುಗೊಂಡಿತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ