ಕೊಲೆ ಆರೋಪಿ ಯನ್ನು ಬಂಧಿಸಿದ ಪೊಲೀಸರು

ಬೆಂಗಳೂರು, ಡಿ.19- ಸ್ನೇಹಿತರಿಬ್ಬರು ನಡೆದು ಹೋಗುತ್ತಿದ್ದಾಗ ನಾಲ್ವರು ದರೋಡೆಕೋರರು ಅಡ್ಡಗಟ್ಟಿ ಸುಲಿಗೆಗೆ ಯತ್ನಿಸಿ ಚಾಕುವಿನಿಂದ ಇರಿದು ಒಬ್ಬನ ಕೊಲೆ ಮಾಡಿ ಪರಾರಿಯಾಗಿದ್ದ ಪೀಟರ್‍ ಎಂಬಾತನನ್ನು ಬಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಡಿ.3ರಂದು ಮಧ್ಯರಾತ್ರಿ ನಾಗವಾರಪಾಳ್ಯ ಮುಖ್ಯರಸ್ತೆಯಲ್ಲಿ ಸಂದೀಪ್ ಮತ್ತು ಮೋಹನ್‍ಕುಮಾರ್‍ ಎಂಬುವವರು ನಡೆದು ಹೋಗುತ್ತಿದ್ದಾಗ ನಾಲ್ವರು ದರೋಡೆಕೋರರು ಇವರಿಬ್ಬರನ್ನು ಅಡ್ಡಗಟ್ಟಿ ಮೊಬೈಲ್ ಮತ್ತು ಪರ್ಸ್ ಕಸಿದುಕೊಳ್ಳಲು ಯತ್ನಿಸಿದ್ದಾರೆ.ಇದನ್ನು ಮೋಹನ್‍ಕುಮಾರ್ ವಿರೋಧಿಸಿದಾಗ ಈತನ ಹೊಟ್ಟೆಗೆ ಚಾಕುವಿನಿಂದ ಚುಚ್ಚಿ ಮೊಬೈಲ್, ಪರ್ಸ್ ಸುಲಿಗೆ ಮಾಡಿ ನಂತರ ಈತನ ಸ್ನೇಹಿತ ಸಂದೀಪನ ಸುಲಿಗೆ ಮಾಡಲು ಮುಂದಾದಾಗ ಈತ ತಪ್ಪಿಸಿಕೊಂಡಿದ್ದನು.

ಚಾಕು ಇರಿತದಿಂದ ಗಂಭೀರ ಗಾಯಗೊಂಡಿದ್ದ ಮೋಹನ್‍ಕುಮಾರ್‍ ಅವರನ್ನು ಬೌರಿಂಗ್‍ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತ ಪಟ್ಟಿದ್ದನು. ಈ ಬಗ್ಗೆ ಸ್ನೇಹಿತ ಸಂದೀಪ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಬಯ್ಯಪ್ಪನಹಳ್ಳಿ ಠಾಣೆ ಇನ್ಸ್ಪೆಕ್ಟರ್ ರಮೇಶ್ ನೇತೃತ್ವದಲ್ಲಿ ವಿಶೇಷ ತಂಡವೊಂದನ್ನು ರಚಿಸಿ ಆರೋಪಿಯೊಬ್ಬನನ್ನು ಬಂಧಿಸಿ ಉಳಿದವರಿಗಾಗಿ ತನಿಖೆ ಮುಂದುವರಿಸಿದ್ದಾರೆ.

ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಚಾಕು, ಸ್ಕೂಟರ್ ಹಾಗೂ ಮೊಬೈಲ್ ಪೊನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ