ಮ.ಪ್ರದೇಶ, ಛತ್ತೀಸ್​ಗಢ ಬಳಿಕ ರೈತರ ಸಾಲಮನ್ನಾ ಮಾಡಲಿದೆಯೇ ರಾಜಸ್ಥಾನ ಸರ್ಕಾರ?

ಜೈಪುರಮತ್ತೊಮ್ಮೆ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಅಶೋಕ್ ಗೆಹ್ಲೋಟ್ ರಾಜ್ಯದ ರೈತರ ಸಾಲಮನ್ನಾ ಬಗ್ಗೆ ಗಮನ ಹರಿಸಿದ್ದು ಆ ಬಗ್ಗೆ ಸಮಾಲೋಚನೆ ನಡೆಸಲು ಇಂದು ಅಧಿಕಾರಿಗಳ ಸಭೆ ಕರೆದಿದ್ದಾರೆ. ಮಧ್ಯಪ್ರದೇಶ, ಛತ್ತೀಸ್​ಗಢ್ ನಲ್ಲಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದ ಬಳಿಕ ಎರಡೂ ರಾಜ್ಯಗಳಲ್ಲಿ ಸರ್ಕಾರಗಳು ರೈತರ ಸಾಲವನ್ನು ಘೋಷಿಸಿವೆ.

ಇದೀಗ ರಾಜಸ್ಥಾನ ಸರ್ಕಾರ ಕೂಡ ರೈತರ ಸಾಲಮನ್ನಾ ಬಗ್ಗೆ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಮಂಗಳವಾರ ಕಾಂಗ್ರೆಸ್ ಸಭೆ ಆಯೋಜಿಸಿದ್ದು, ಸಭೆಯಲ್ಲಿ ಡಿಸಿಎಂ ಸಚಿನ್ ಪೈಲಟ್ ಕೂಡ ಭಾಗವಹಿಸಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಈ ಸಭೆಯಲ್ಲಿ ರೈತರ ಸಾಲಮನ್ನಾ ಬಗೆಗಿನ ವಿವಿಧ ಅಂಶಗಳನ್ನು ಚರ್ಚಿಸಲಾಗುವುದು ಎಂದು ತಿಳಿದುಬಂದಿದೆ. ಅದೇ ಸಮಯದಲ್ಲಿ, ಸಾಲಮನ್ನಾದಿಂದ ರಾಜ್ಯದ ಮೇಲೆ ಬೀಳುವ ಹೊರೆ, ಆದಾಯದ ಮೂಲ ಎಲ್ಲದರ ಬಗ್ಗೆ ಚರ್ಚೆ ನಡೆಯಲಿದೆ.

ನಿನ್ನೆಯಷ್ಟೇ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕಮಲ್ ನಾಥ್, ಚುನಾವಣಾ ಪ್ರಚಾರದ ಸಮಯದಲ್ಲಿ ಮತದಾರರಿಗೆ ನೀಡಿದ್ದ ಭರವಸೆಯಂತೆ ರೈತರ 2 ಲಕ್ಷ ರೂ. ವರೆಗಿನ ಸಾಲ ಮನ್ನಾ ಮಾಡುವುದಾಗಿ ತಿಳಿಸಿದರು. ಇದರ ಬೆನ್ನಲ್ಲೇ ಛತ್ತೀಸ್​ಗಢ್ ದಲ್ಲಿ ನೂತನವಾಗಿ ಸರ್ಕಾರ ರಚಿಸಿದ ಕಾಂಗ್ರೆಸ್ ರೈತರ ಸಾಲಮನ್ನಾವನ್ನು ಘೋಷಿಸಿದೆ.

ಕಾಂಗ್ರೆಸ್ ಸರ್ಕಾರ ರಚಿಸಿದ ಎರಡೂ ರಾಜ್ಯಗಳಲ್ಲಿ ರೈತರ ಸಾಲಮನ್ನಾ ಘೋಷಿಸಿರುವುದರಿಂದ ರಾಜಸ್ಥಾನದಲ್ಲೂ ರೈತರ ಸಾಲಮನ್ನಾ ಆಗುವ ನಿರೀಕ್ಷೆ ಎಲ್ಲರಲ್ಲೂ ಮನೆಮಾಡಿದೆ. ಗಮನಾರ್ಹವಾಗಿ, ಅಶೋಕ್ ಗೆಹ್ಲೋಟ್ ಮೂರನೇ ಬಾರಿಗೆ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ರೈತಾಪಿ ವರ್ಗ ಸಾಲಮನ್ನಾ ನಿರೀಕ್ಷಿಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ