ಕಾಂಡಿಮೆಂಟ್ಸ್ ಮಾಲೀಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಸಾಫ್ಟ್‍ವೇರ್‍ ಇಂಜಿನಿಯರ್‍

ಬೆಂಗಳೂರು,ಡಿ.16- ಸಾಫ್ಟ್‍ವೇರ್ ಇಂಜಿನಿಯರ್‍ಗಳೆಲ್ಲ ಸಾಫ್ಟ್ ಅಲ್ಲ. ಇಲ್ಲೊಬ್ಬ ಸಾಫ್ಟ್‍ವೇರ್‍ ಇಂಜಿನಿಯರ್‍ ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಕಾಂಡಿಮೆಂಟ್ಸ್ ಮಾಲೀಕನಿಗೆ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ.

ಮಹಾಲಕ್ಷ್ಮಿ ಬಡಾವಣೆ ಪೊಲೀಸ್‍ಠಾಣೆ ವ್ಯಾಪ್ತಿಯ ಕುರಬರಹಳ್ಳಿ ವೃತ್ತದಲ್ಲಿರುವ ಸಾಯಿ ಕಾಂಡಿಮೆಂಟ್ಸ್ ಮಾಲೀಕ ಮಂಜುನಾಥ್(55) ಕೊಲೆಯಾದ ದುರ್ದೈವಿ.

ಮಾರತಹಳ್ಳಿ ಸಮೀಪದ ಸಾಫ್ಟ್‍ವೇರ್ ಸಂಸ್ಥೆಯೊಂದರಲ್ಲಿ ಸಾಫ್ಟ್‍ವೇರ್‍ ಇಂಜಿನಿಯರ್‍ ಆಗಿರುವ ರಾಜಾಜಿನಗರ ನಿವಾಸಿ ಆಕಾಶ್ ಕೊಲೆ ಆರೋಪಿ.
ಇಂದು ಬೆಳಗ್ಗೆ 5.30ರ ಸಮಯದಲ್ಲಿಕಾಂಡಿಮೆಂಟ್ ಮುಂಭಾಗ ನೀರು ಹಾಕುತ್ತಿದ್ದ ಮಾಲೀಕ ಮಂಜುನಾಥ್‍ನೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಆರೋಪಿ ಆಕಾಶ್‍ನನ್ನು ಬಂಧಿಸಿರುವ ಮಹಾಲಕ್ಷ್ಮಿಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.
ಕೊಲೆ ಹಿನ್ನೆಲೆ:

ಸಾಫ್ಟ್‍ವೇರ್‍ ಇಂಜಿನಿಯರ್‍ ಆಕಾಶ್ ನಿನ್ನೆ ಡ್ಯೂಟಿ ಮುಗಿಸಿ ಕುರಬರಹಳ್ಳಿಯಲ್ಲಿರುವ ತನ್ನ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡಿದ್ದ. ಇಂದು ಬೆಳಗ್ಗೆ 5.30ರಲ್ಲಿ ಸ್ನೇಹಿತನ ಮನೆಯಿಂದ ರಾಜಾಜಿನಗರದಲ್ಲಿರುವ ತನ್ನ ಮನೆಗೆ ಬುಲೆಟ್‍ನಲ್ಲಿ ತೆರಳುತ್ತಿದ್ದ.

ಬುಲೆಟ್ ಕುರುಬರಹಳ್ಳಿ ವೃತ್ತದ ಸಮೀಪ ಸ್ಕಿಡ್ ಆದ ಪರಿಣಾಮಆಕಾಶ್ ಕೆಳಗೆ ಬಿದ್ದಿದ್ದ. ಇದೇ ವೇಳೆ ಪಕ್ಕದಲ್ಲೇಇದ್ದಕಾಂಡಿಮೆಂಟ್ಸ್ ಮಾಲೀಕ ಮಂಜುನಾಥ್‍ರಸ್ತೆಗೆ ನೀರು ಹಾಕುತ್ತಿದ್ದ.

ಬುಲೆಟ್ ಬೀಳಲು ಮಂಜುನಾಥ್‍ ರಸ್ತೆಗೆ ನೀರು ಹಾಕಿರುವುದೇ ಕಾರಣ ಎಂದುಕೊಂಡ ಆಕಾಶ್ ಮಾಲೀಕನೊಂದಿಗೆ ಜಗಳ ತೆಗೆದ.
ಈ ಸಂದರ್ಭದಲ್ಲಿಆಕಾಶ್ ಮತ್ತು ಮಂಜುನಾಥ್ ನಡುವೆ ವಾಗ್ವಾದ ನಡೆಯಿತು. ಆಗ ತಾಳ್ಮೆ ಕಳೆದುಕೊಂಡ ಆಕಾಶ್‍ ತನ್ನ ಬಳಿ ಇದ್ದ ಚಾಕು ತೆಗೆದು ಮಂಜುನಾಥ್‍ರ ಎದೆ ಮತ್ತು ಕುತ್ತಿಗೆಗೆ ಇರಿದ.

ಇರಿತದಿಂದ ರಕ್ತಸ್ರಾವವಾಗಿ ಮಂಜುನಾಥ್ ಸ್ಥಳದಲ್ಲೇ ಕುಸಿದು ಬಿದ್ದುಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ