ವೈಕುಂಠ ಏಕಾದಶಿ ಪ್ರಯುಕ್ತ ಶ್ರೀನಿವಾಸ ದೇವಲಾಯಗಳಲ್ಲಿ ಶರವಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಕ್ತರಿಗೆ ಲಾಡು ಹಂಚಿಕೆ

ಬೆಂಗಳೂರು, ಡಿ.16-ಪವಿತ್ರ ವೈಕುಂಠ ಏಕಾದಶಿ ಅಂಗವಾಗಿ ಪ್ರಮುಖ ಶ್ರೀನಿವಾಸ ದೇವಾಲಯಗಳಲ್ಲಿ ಭಕ್ತರಿಗೆ ಶರವಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಲಾಡುಗಳ ವಿತರಣೆ ಮಾಡಲಾಗುವುದು.

ಚಾರಿಟಬಲ್ ಟ್ರಸ್ಟ್‍ನ ಮುಖ್ಯಸ್ಥರು ಹಾಗೂ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರು ಮುಜರಾಯಿ ಇಲಾಖೆ ವ್ಯಾಪ್ತಿಯ ಪ್ರಮುಖ ಶ್ರೀನಿವಾಸ ದೇವಾಲಯಗಳಿಗೆ ಲಾಡು ವಿತರಣೆ ಮಾಡಲು ಇಂದು ಚಾಲನೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ವರ್ಷವೂ ವೈಕುಂಠ ಏಕಾದಶಿ ಆಚರಣೆ ಸಂದರ್ಭದಲ್ಲಿ ಭಕ್ತರಿಗೆ ಪ್ರಸಾದ ರೂಪದಲ್ಲಿ ಲಾಡು ವಿತರಿಸಲು ಒಂದು ಲಕ್ಷ ಲಾಡು ತಯಾರಿಸಲಾಗಿದೆ.ಕಳೆದ ಹತ್ತು ದಿನಗಳಿಂದಲೂ ನಿರಂತರವಾಗಿ ಲಾಡು ತಯಾರಿಸಲಾಗುತ್ತಿದೆ.ನಾಳೆ ಪ್ರಮುಖ ಶ್ರೀನಿವಾಸ ದೇವಾಲಯಗಳಿಗೆ ಲಾಡುಗಳನ್ನು ತಲುಪಿಸಲಾಗುತ್ತದೆ.ಡಿ.18 ರಂದು ಶ್ರೀನಿವಾಸ ದೇವಾಲಯಗಳಲ್ಲಿ ಭಕ್ತರಿಗೆ ಲಾಡುಗಳನ್ನು ವಿತರಿಸಲಾಗುತ್ತದೆ.

ಭಕ್ತರೆಲ್ಲರೂ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದು ಲಾಡು ಪ್ರಸಾದ ಪಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅದೇ ಮಾದರಿಯ ಲಾಡುಗಳನ್ನು ಟ್ರಸ್ಟ್‍ವತಿಯಿಂದ ನೀಡಲಾಗುತ್ತಿದೆ.ವೈಕುಂಠ ಏಕಾದಶಿ ಸಂದರ್ಭದಲ್ಲಿ ನಾಡಿನ ಸಮಸ್ತ ಜನರಿಗೆ ಸುಖ, ಶಾಂತಿ, ನೆಮ್ಮದಿ ಸಿಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ