ಅಧಿವೇಶನ ನಡೆಸಲು ಸರ್ಕಾರಕ್ಕೆ ಆಸಕ್ತಿಯಿಲ್ಲ ಎಂದು ಆಕ್ಷೇಪಿಸಿ ಬಿಜೆಪಿಯಿಂದ ಸಭಾತ್ಯಾಗ

ಬೆಳಗಾವಿ, ಡಿ.13-ಅಧಿವೇಶನ ನಡೆಸಲು ಸರ್ಕಾರಕ್ಕೆ ಆಸಕ್ತಿ ಇಲ್ಲ, ಸಚಿವರೂ ಇಲ್ಲ ಎಂದು ಆಕ್ಷೇಪಿಸಿ ಬಿಜೆಪಿ ಸಭಾತ್ಯಾಗ ಮಾಡಿದ ಘಟನೆ ವಿಧಾನಸಭೆಯಲ್ಲಿ ಜರುಗಿತು.

ಬರ ವಿಚಾರದ ಕುರಿತು ಬಿಜೆಪಿಯ ರಾಜೀವ್ ಮಾತನಾಡುತ್ತಿದ್ದಾಗ ಆಡಳಿತ ಪಕ್ಷದ ಸಾಲಿನಲ್ಲಿ ಸಚಿವರ ಹಾಜರಾತಿ ಕಡಿಮೆ ಇರುವುದನ್ನು ಗಮನಿಸಿದ ಬಿಜೆಪಿಯ ಮತ್ತೊಬ್ಬ ಶಾಸಕ ಅರವಿಂದ ಲಿಂಬಾವಳಿ ಮತ್ತಿತರರು ಆಕ್ಷೇಪಿಸಿದರು.

ಸಚಿವರುಗಳೇ ಇಲ್ಲ. ಚರ್ಚೆ ಮಾಡುವುದಾದರೂ ಹೇಗೆ ? ಸರ್ಕಾರಕ್ಕೆ ಸದನ ನಡೆಸುವ ಬಗ್ಗೆ ಗಂಭೀರತೆ ಇಲ್ಲ ಎಂದು ಬಿಜೆಪಿಯವರು ಆಕ್ಷೇಪಿಸಿದಾಗ ಜೆಡಿಎಸ್‍ನ ಶಿವಲಿಂಗೇಗೌಡ ಗಟ್ಟಿಯಾಗಿ ಆಕ್ಷೇಪ ವ್ಯಕ್ತಪಡಿಸಿದರು.

ವಿರೋಧಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಬರದಂತಹ ಗಂಭೀರ ವಿಚಾರದ ಬಗ್ಗೆ ಚರ್ಚೆ ಮಾಡುವಾಗ ಸಚಿವರಿಲ್ಲ ಎಂದರೆ ಹೇಗೆ? ಸದನಕ್ಕೆ ಗಾಂಭೀರ್ಯ ಬೇಡವೇ ಎಂದು ಸಭಾತ್ಯಾಗ ಮಾಡಿದರು.

ಆ ನಂತರ ವಿರೋಧ ಪಕ್ಷದವರು ಇಲ್ಲದಾಗ ಸದನ ನಡೆಸುವುದು ಸೂಕ್ತವಲ್ಲ ಎಂದು ಜೆಡಿಎಸ್‍ನ ಎ.ಟಿ.ರಾಮಸ್ವಾಮಿ ಹೇಳಿದಾಗ ಸಭಾಧ್ಯಕ್ಷರ ಸ್ಥಾನದಲ್ಲಿದ್ದ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಅವರು, ಸದನದ ಕಾರ್ಯಕಲಾಪಗಳನ್ನು ಭೋಜನದ ವಿರಾಮದ ವೇಳೆಗೆ ಮುಂದೂಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ