ಬುಲಂದ್ ಶೆಹರ್ ಹಿಂಸಾಚಾರ ಪ್ರಕರಣ: ಓರ್ವ ಯೋಧನ ಬಂಧನ

ಬುಲಂದ್ ಶಹರ್​: ಉತ್ತರಪ್ರದೇಶದ ಬುಲಂದ್ ಶೆಹರ್ ನ ಹಿಂಸಾಚಾರ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಸುಬೋಧ್​ ಕುಮಾರ್​ ಸಿಂಗ್​ ಮತ್ತು ಯುವಕ ಸುಮಿತ್​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಧ ಜಿತೇಂದ್ರ ಮಲೀಕ್​ (ಜಿತು ಫೌಜಿ) ಎಂಬವರನ್ನು ಉತ್ತರಪ್ರದೇಶದ ಎಸ್​ಟಿಎಫ್​ ಬಂಧಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಎಸ್​ಟಿಎಫ್​ ಹಿರಿಯ ಪೊಲೀಸ್​ ಅಧಿಕಾರಿ ಅಭಿಷೇಕ್​ ಸಿಂಗ್ ಅವರು, ಪ್ರಕರಣದ ಶಂಕಿತ ಆರೋಪಿ, ‘ಜಿತು ಫೌಜಿಯನ್ನು ನಾವು ಬಂಧಿಸಿದ್ದೇವೆ. ಶನಿವಾರ ಮಧ್ಯರಾತ್ರಿ ಸೇನೆ ಜಿತು ಫೌಜಿಯನ್ನು ನಮ್ಮ ವಶಕ್ಕೆ ನೀಡಿತು. ಪ್ರಸ್ತುತ ಪ್ರಾಥಮಿಕ ತನಿಖೆ ಪೂರ್ಣಗೊಳಿಸಿದ್ದೇವೆ. ಅವರನ್ನು ಬುಲಂದ್ ​ಶಹರ್ ಗೆ ಕಳುಹಿಸಲಾಗುವುದು. ನಂತರ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು ಎಂದು ​ ತಿಳಿಸಿದ್ದಾರೆ.

ಭಾರತೀಯ ಸೇನೆಯ 22 ರಾಷ್ಟ್ರೀಯ ರೈಫಲ್ಸ್​ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿತು ಫೌಜಿ ಮೂಲತಃ ಬುಲಂದ್ ಶೆಹರ್ ನವರಾಗಿದ್ದಾರೆ. 15 ದಿನಗಳ ರಜೆ ಮೇರೆಗೆ ಊರಿಗೆ ಬಂದಿದ್ದ ಅವರು, ಘರ್ಷಣೆ ಸಂಭವಿಸಿದ ದಿನ ಅಲ್ಲಿಯೇ ಇದ್ದರು. ಅಲ್ಲದೆ, ಘರ್ಷಣೆಯ ಹಲವು ವಿಡಿಯೋಗಳಲ್ಲಿ ಅವರ ಚಲನವಲನ ದಾಖಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಘಟನೆಯಲ್ಲಿ ಸುಬೋಧ್ ಕುಮಾರ್​ ಸಿಂಗ್​ ಮತ್ತು ಯುವಕ ಸಮಿತ್​ ಮೃತಪಟ್ಟ ನಂತರ ಯೋಧ ಜಿತು ಫೌಜಿ ನೇರವಾಗಿ ಕಾಶ್ಮೀರದ ಸೋಪೋರ್​ಗೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಜಿಜು ಫೌಜಿಯನ್ನು ಶುಕ್ರವಾರ ರಾತ್ರಿ ಜಮ್ಮು ಕಾಶ್ಮೀರದ ಸೋಪೊರೆ ಪಟ್ಟಣದಲ್ಲಿ ಸೇನೆ ವಶಕ್ಕೆ ಪಡೆದಿತ್ತು. ನಂತರ ಅವರನ್ನು ಎಸ್​ಟಿಎಫ್​ಗೆ ಒಪ್ಪಿಸಲಾಗಿತ್ತು. ಬುಲಂದ್ ಶೆಹರ್ ನಲ್ಲಿ ಇತ್ತೀಚೆಗೆ ಗೋ ಹತ್ಯೆ ಖಂಡಿಸಿ ನಡೆದಿದ್ದ ಪ್ರತಿಭಟನೆ ಘರ್ಷಣೆಗೆ ತಿರುಗಿ ಅದರಲ್ಲಿ ಇನ್ಸ್​ಪೆಕ್ಟರ್​ ಸುಬೋಧ್​ಕುಮಾರ್​ ಸಿಂಗ್​ ಮತ್ತು ವಿದ್ಯಾರ್ಥಿ ಸುಮಿತ್​ ಮೃತಪಟ್ಟಿದ್ದರು.

Bulandshahr Violence,suspected Armyman,Arrest

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ