ದಲ್ಲಾಳಿಗಳಿಗೆ ಬ್ರೇಕ್ ಹಾಕಲು ಕಂದಾಯ ಇಲಾಖೆಗೆ ಜಿಲ್ಲಾಧಿಕಾರಿಯ ದಿಢೀರ್ ಭೇಟಿ

ಬೆಂಗಳೂರು, ನ.28- ಕಂದಾಯ ಇಲಾಖೆಯ ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಹಾಕಲು ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ.ವಿಜಯ್‍ಶಂಕರ್ ಅವರು ಇಂದು ನಡೆಸಿದ ದಿಢೀರ್ ದಾಳಿಯಲ್ಲಿ ರಾಜಾಜಿನಗರದ ನಾಡ ಕಚೇರಿಯಲ್ಲಿ ಇಬ್ಬರು ಮಧ್ಯವರ್ತಿಗಳು ಸಿಕ್ಕಿಬಿದಿದ್ದಾರೆ.

ನಾಡ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತೀವ್ರವಾಗಿದೆ.ಸರ್ಕಾರಿ ಅಧಿಕಾರಿಗಳು, ಸಾರ್ವಜನಿಕರು ನೇರವಾಗಿ ಹೋದರೆ ಕೆಲಸ ಮಾಡಿಕೊಡುವುದಿಲ್ಲ.ಮಧ್ಯವರ್ತಿಗಳ ಮೂಲಕವೇ ಹೋಗಬೇಕಿದೆ ಎಂದು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಹಲವಾರು ಬಾರಿ ಹಲವರು ದೂರು ನೀಡಿದ್ದರು.

ಈ ರೀತಿಯ ದೂರುಗಳನ್ನು ಆಧರಿಸಿ ಜಿಲ್ಲಾಧಿಕಾರಿಗಳು ಈಗಾಗಲೇ ಯಲಹಂಕ ಮತ್ತು ಆನೇಕಲ್ ಭಾಗದಲ್ಲಿ ತಪಾಸಣೆ ನಡೆಸಿದರು.ಆದರೆ, ಆ ದಾಳಿ ಯಶಸ್ವಿಯಾಗಲಿಲ್ಲ.

ಈ ಹಿನ್ನೆಲೆಯಲ್ಲಿ ಕಾರ್ಯತಂತ್ರ ಬದಲಾಯಿಸಿದ ಜಿಲ್ಲಾಧಿಕಾರಿ, ದೂರು ಹೇಳಿದ್ದ ಸಾರ್ವಜನಿಕರನ್ನು ಅವಲಂಬಿಸದೆ ತಾವೇ ನೇರವಾಗಿ ಅಖಾಡಕ್ಕಿಳಿದಿದ್ದಾರೆ.
ಬೇರೆ ಬೇರೆ ತಾಲ್ಲೂಕುಗಳ ಗ್ರಾಮ ಲೆಕ್ಕಾಧಿಕಾರಿಗಳನ್ನು ನಾಡ ಕಚೇರಿ ಸುತ್ತ ರಹಸ್ಯವಾಗಿ ನಿಗಾ ವಹಿಸಲು ನಿಯೋಜಿಸಿದ್ದಾರೆ. ಅದನ್ನು ಆಧರಿಸಿ ಇಂದು ಬೆಳಗ್ಗೆಯಿಂದ ಜಿಲ್ಲಾಧಿಕಾರಿ ವಿಜಯ್‍ಶಂಕರ್ ತಮ್ಮ ಅಧಿಕಾರಿಗಳ ತಂಡದ ಜತೆ ದಿಢೀರ್ ದಾಳಿ ನಡೆಸಿದ್ದಾರೆ.

ಆರಂಭದಲ್ಲಿ ಕೆಜಿ ರಸ್ತೆಯಲ್ಲಿರುವ ಕಂದಾಯ ಭವನವನ್ನು ಪರಿಶೀಲಿಸಲಾಯಿತು.ಅಲ್ಲಿ ಸಾರ್ವಜನಿಕರನ್ನು ಅನಗತ್ಯವಾಗಿ ಕಾಯಿಸುತ್ತಿರುವುದು ಮತ್ತು ಕೆಲವು ಅನಪೇಕ್ಷಿತ ವ್ಯಕ್ತಿಗಳು ಕಚೇರಿಯಲ್ಲಿರುವುದು ಕಂಡು ಬಂದಿದೆ.

ಅನಪೇಕ್ಷಿತ ವ್ಯಕ್ತಿಗಳಿಗೆ ಮಣೆ ಹಾಕಿ ಸಾರ್ವಜನಿಕರನ್ನು ಕಾಯಿಸುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳು ಕಚೇರಿಯ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.ಇದೇ ಪರಿಸ್ಥಿತಿ ಮುಂದುವರೆದರೆ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.

ಅಲ್ಲಿಂದ ನೇರವಾಗಿ ರಾಜಾಜಿನಗರದ ಬಿಡಿಎ ಕಾಂಪ್ಲೆಕ್ಸ್‍ನಲ್ಲಿರುವ ನಾಡ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಈ ಮೊದಲೇ ಅಲ್ಲಿ ಜನಸಾಮಾನ್ಯರಂತೆ ಕಚೇರಿಯ ಕಾರ್ಯಚಟುವಟಿಕೆಗಳ ಮೇಲೆ ನಿಗಾ ಇಟ್ಟಿದ್ದ ಗ್ರಾಮ ಲೆಕ್ಕಾಧಿಕಾರಿಗಳು ಇಬ್ಬರು ಮಧ್ಯವರ್ತಿಗಳಾದ ಪ್ರಕಾಶ್‍ನಗರದ ಹನುಮಂತಪ್ಪ (57) ಹಾಗೂ ಉಲ್ಲಾಳ ಮುಖ್ಯರಸ್ತೆಯ ಅನ್ನಪೂರ್ಣಲೇಔಟ್‍ನ ಎಚ್.ಕೆ.ರಾಜಣ್ಣ(49) ಎಂಬುವರನ್ನು ಗುರಿತಿಸಿದ್ದರು. ಜಿಲ್ಲಾಧಿಕಾರಿಗಳು ದಾಳಿ ನಡೆಸಿದಾಗ ಮಧ್ಯವರ್ತಿಗಳನ್ನು ಹಿಡಿದು ವಿಚಾರಣೆ ನಡೆಸಲಾಯಿತು.ಅವರ ಕೈಯಲ್ಲಿ ಕೆಲವು ದಾಖಲೆ ಪತ್ರಗಳಿದ್ದು, ಅವು ಅವರಿಗೆ ಸಂಬಂಧಿಸಿರಲಿಲ್ಲ. ಬೇರೆಯವರಿಗೆ ಸಂಬಂಧಿಸಿದ್ದವಾಗಿದ್ದವು.ಈ ಬಗ್ಗೆ ಪ್ರಶ್ನಿಸಲಾಗಿ ಮಧ್ಯವರ್ತಿಗಳು ಸಮರ್ಪಕವಾಗಿ ಉತ್ತರ ನೀಡಲು ತಡಕಾಡಿದರು.ತಕ್ಷಣವೇ ಅವರನ್ನು ಪೆÇಲೀಸರ ವಶಕ್ಕೆ ಒಪ್ಪಿಸಿ ಕಾನೂನು ರೀತಿಯ ಕ್ರಮ ಜರುಗಿಸಲು ಸೂಚಿಸಲಾಯಿತು.

ಕಂದಾಯ ಅಧಿಕಾರಿ ಶ್ವೇತಾ ಅವರು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ದೂರು ನೀಡಿದ್ದಾರೆ.ಅನಂತರ ಹೆಬ್ಬಾಳದ ನಾಡ ಕಚೇರಿಗೆ ಜಿಲ್ಲಾಧಿಕಾರಿಗಳು ತಮ್ಮ ತಂಡದೊಂದಿಗೆ ದಾಳಿ ನಡೆಸಿದ್ದಾರೆ.

ಅಲ್ಲಿ ವಯಸ್ಸಾದವರು, ಮಹಿಳೆಯರು ಕಾಯುತ್ತಾ ಕುಳಿತಿರುವುದನ್ನು ಜಿಲ್ಲಾಧಿಕಾರಿ ಗಮನಿಸಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಕಂಪ್ಯೂಟರ್ ನೆಟ್‍ವರ್ಕ್‍ನ ಸಮಸ್ಯೆ ಇದೆ ಎಂದು ಸಿಬ್ಬಂದಿಗಳು ಹೇಳಿದಾಗ ಸಿಟ್ಟಾದ ಡಿಸಿ, ನೆಟ್‍ವರ್ಕ್ ಸಮಸ್ಯೆ ಬಗ್ಗೆ ರಾಷ್ಟ್ರೀಯ ಮಾಹಿತಿ ಕೇಂದ್ರದ ಸಿಬ್ಬಂದಿಗಳ ಗಮನಕ್ಕೆ ತಂದರೆ ಅರ್ಧಗಂಟೆಯಲ್ಲೇ ಸಮಸ್ಯೆ ಬಗೆಹರಿಯುತ್ತದೆ. ಅಷ್ಟು ಸಾಮಾನ್ಯ ಜ್ಞಾನ ಇಲ್ಲದೆ ಹೇಗೆ ಕೆಲಸ ಮಾಡುತ್ತೀರಾ ? ಸಾರ್ವಜನಿಕರನ್ನು ಬಿಸಿಲಿನಲ್ಲಿ ಕಾಯಿಸುವುದು ಏಕೆ? ಅಗತ್ಯಬಿದ್ದರೆ ಮತ್ತಷ್ಟು ಕಂಪ್ಯೂಟರ್‍ಗಳನ್ನು ತೆಗೆದುಕೊಳ್ಳಿ.ಯಾವುದೇ ಕಾರಣಕ್ಕೂ ಜನ ಸಾಮಾನ್ಯರಿಗೆ ತೊಂದರೆಯಾಗಬಾದರು.ಇನ್ನು ಮುಂದೆ ಇಂತಹ ಘಟನೆಗಳು ಕಂಡು ಬಂದರೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬೆಂಗಳೂರು ಉತ್ತರ ತಾಲ್ಲೂಕು ತಹಸೀಲ್ದಾರ್ ತೇಜಸ್‍ಕುಮಾರ್ ಅವರನ್ನೂ ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಯವರು, ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಗಮನ ಹರಿಸುವಂತೆ ತಾಕೀತು ಮಾಡಿದರು.

ಇದೇ ವೇಳೆ ಆರ್‍ಟಿಒ ಕಚೇರಿಗಳಿಗೂ ದಿಢೀರ್ ದಾಳಿ ಮಾಡಿ ಇಬ್ಬರು ದಲ್ಲಾಳಿಗಳನ್ನು ಹಿಡಿದು ತೀವ್ರ ತರಾಟೆ ತೆಗೆದುಕೊಂಡು, ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪೆÇಲೀಸರಿಗೆ ಸೂಚನೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ