ಆಂಬಿಡೆಂಟ್ ಕಂಪನಿಯ ಆಸ್ತಿ ಜಪ್ತಿ ಮಾಡಲಿರುವ ರಾಜ್ಯ ಸರ್ಕಾರ

ಬೆಂಗಳೂರು,ನ.21- ಸಾರ್ವಜನಿಕರಿಗೆ ವಂಚಿಸಿರುವ ಹೂಡಿಕೆ ಸಂಸ್ಥೆಯಾದ ಆಂಬಿಡೆಂಟ್ ಕಂಪನಿಯ ಆಸ್ತಿ ಜಪ್ತಿ ಮಾಡಿ ಹೂಡಿಕೆದಾರರ ಹಣ ಹಿಂದಿರುಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಕುರಿತು ಸಾರ್ವಜನಿಕ ಪ್ರಕಟಣೆ ಹೊರಡಿಸಿದ ಸರ್ಕಾರ, ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿರುವ ಕಾರಣದಿಂದ ಹೂಡಿಕೆದಾರರ ಹಿತ ಕಾಪಾಡಬೇಕಾಗಿದೆ. ಹೀಗಾಗಿ, ಹಣಕಾಸು ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡಿದ ಹೂಡಿಕೆದಾರರ ಹಿತರಕ್ಷಣೆ ಕಾಯ್ದೆ ಸೆಕ್ಷನ್- 5ರ ಅಡಿಯಲ್ಲಿ ಅಧಿಕಾರವನ್ನು ಚಲಾಯಿಸಲಾಗುವುದು. ಇದಕ್ಕಾಗಿ ಉತ್ತರ ಉಪ ವಿಭಾಗದ ಉಪ ವಿಭಾಗಾಧಿಕಾರಿಯನ್ನು ಹೂಡಿಕೆದಾರರ ಹಿತರಕ್ಷಣೆ ಕಾಯ್ದೆಯ ಸಮರ್ಪಕ ಜಾರಿಗೆ ನಿಯೋಜಿಸಲಾಗಿದೆ ಎಂದು ತಿಳಿಸಿದೆ.

ಆಂಬಿಡೆಂಟ್ ಕಂಪನಿ ಪಾಲುದಾರರು, ನಿರ್ದೇಶಕರು, ವ್ಯವಸ್ಥಾಪಕರು, ಪ್ರಚಾರಕರು ಮತ್ತು ವ್ಯಸ್ಥಾಪಕರು ಸೇರಿದಂತೆ ಈ ಕಾಯ್ದೆಯ ಸೆಕ್ಷನ್ 3(2) ರಡಿ ಕಂಪನಿಯ ಜೊತೆಗೆ ವ್ಯವಹರಿಸಿರುವ ಇತರರ ಚರ ಮತ್ತು ಸ್ಥಿರ ಆಸ್ತಿಗಳನ್ನು ಜಪ್ತಿ ಮಾಡಿಕೊಂಡು ಸಾರ್ವಜನಿಕರ ಹಣ ಹಿಂದಿರುಗಿಸುವ ಹೊಣೆ ಉತ್ತರ ಉಪ ವಿಭಾಗಾಧಿಕಾರಿಯ ಮೇಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆಂಬಿಡೆಂಟ್ ಕಂಪನಿಯ ಜೊತೆಗ ವ್ಯವಹಾರ ಇರಿಸಿಕೊಂಡು ಆಸ್ತಿಪಾಸ್ತಿ ಮಾಡಿರುವವರ ಮತ್ತು ರಿಯಲ್ ಎಸ್ಟೇಟ್ ವ್ಯವಹಾರದ ನೆಪದಲ್ಲಿ ಕಂಪನಿಯಿಂದ ಹಣ ಪಡೆದಿರುವವರ ಬಗ್ಗೆ 080-22210076 ಹಾಗೂ 9916505331, 9480331096 ದೂರವಾಣಿ ಸಂಖ್ಯೆಗೆ ಮಾಹಿತಿ ನೀಡಬಹುದಾಗಿದೆ ಎಂದು ತಿಳಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ