ಸನಾತನ ವೈಧಿಕ ಧರ್ಮ ಈಗ ಹಿಂದು ಧರ್ಮ: ಶೃಂಗೇರಿ ಜಗದ್ಗುರುಗಳು

ಬಾಗಲಕೋಟೆ ನ. 18 :ಸನಾತನ ವೈಧಿಕ ಧರ್ಮವೇ ಪ್ರಸ್ತುತ ಹಿಂದು ಧರ್ಮವಾಗಿದೆ, ಪರಂಪರೆ, ಸಂಪ್ರದಾಯಗಳನ್ನು ಕಾಪಾಡಿಕೊಂಡು ಮುಂದುವರೆಸಿಕೊಂಡು ಬರುವದರಲ್ಲಿಯೇ ಸತ್ಕರ್ಮ, ಸದ್ಧರ್ಮ ಅಡಗಿದೆ ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಅಪ್ಪಣೆ ಕೊಡಿಸಿದ್ದಾರೆ.

ಶ್ರೀಮಠದ ವಿಜಯಯಾತ್ರೆ ಕೈಗೊಂಡು ರಾಜ್ಯದಾದ್ಯಂತ ಭೇಟಿ ನೀಡುತ್ತಿರುವ ಪೂಜ್ಯರು ಬಾಗಲಕೋಟೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮನಗೂಳಿ ಲೇಔಟನ ಶ್ರೀ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಸ್ವಾಗತ ಸಮಿತಿಯಿಂದ ಗೌರವಾಭಿನಂದನ, ಭಿನ್ನವತ್ತಲೆ ಸ್ವೀಕರಿಸಿ ಅನುಗ್ರಹ ಸಂದೇಶ ನೀಡಿದ ಜಗದ್ಗುರುಗಳು ಹಿಂದು ಧರ್ಮ ಸನಾತನ ಧರ್ಮ ಎಂದು ಕರೆಸಿಕೊಳ್ಳುತ್ತಿರುವದು ಇತ್ತೀಚೆಗೆ ಮಾತ್ರ ಆದರೆ ವಾಸ್ತವಿಕವಾಗಿ ಅದು ಸನಾತನ ವೈದಿಕ ಧರ್ಮ ಎಂದರು.

ಕರ್ಮ ಫಲಗಳು ಕ್ರಿಯಾತ್ಮಕವಾಗಿರಬೇಕು, ಭಗವಂತನಲ್ಲಿ ನಮ್ಮ ಕೋರಿಕೆ, ದಯಾ ಗುಣ, ಮಾನವೀಯ ಮೌಲ್ಯಗಳ ಬಗ್ಗೆ ಇರಬೇಕೆ ವಿನಃ ಸಂಸಾರಿಕ ಲಾಭದ ಪ್ರಾರ್ಥನೆ ಇರಬಾರದು, ಇದರಿಂದ ಮನುಕುಲದ ಕಲ್ಯಾಣ ಸಾಧ್ಯ ಎಂದರು.

ಪ್ರಾಮಾಣಿಕತೆ, ದಾನಗುಣ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕನ್ನು ರೂಪಿಸಿಕೊಳ್ಳಬೇಕು, ನಮ್ಮ ಧರ್ಮ, ನಮ್ಮ ಪರಂಪರೆಗಳನ್ನು ಮುಂದುವರೆಸಿಕೊಂಡು ಬರಬೇಕೆ ವಿನಃ ಅನ್ಯ ಪರಂಪರೆಯ ವ್ಯಾಮೋಹ ಇರಬಾರದೆಂದರು. ಭಾರತದ ಮೌಲ್ಯಗಳಿಗೆ ತನ್ನದೇ ಆದ ಗೌರವ ಇದೆ, ಅದು ಜಾಗತಿಕ ಸ್ತರದ ಗೌರವದ ಸ್ಥಾನ ಹೊಂದಿದೆ, ಇದಕ್ಕೆ ಆಧ್ಯಾತ್ಮಿಕ ಶಕ್ತಿ ಕಾರಣ, ಈ ಹಾದಿಯಲ್ಲಿ ಎಲ್ಲರೂ ನಡೆದುಕೊಂಡು ಬರಬೇಕೆಂದು ಪೂಜ್ಯ ಶ್ರೀ ವಿಧುಶೇಖರ ಮಹಾಸ್ವಾಮಿಗಳು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪಂ. ರಘೋತ್ತಮಾಚಾರ್ಯ ನಾಗಸಂಪಗಿ ಅವರು ಶ್ರೀ ಶಂಕರ ಭಗವತ್ಪಾದರ ಆಧ್ಯಾತ್ಮಿಕ ಮೌಲ್ಯ, ಧಾರ್ಮಿಕ ಪರಂಪರೆ ಕುರಿತು ವಿವರಿಸಿ ಶ್ರೀಮಠದೊಂದಿಗೆ ಬಾಗಲಕೋಟೆ ವಿಶೇಷ ಬಾಂಧವ್ಯ ಹೊಂದಿದೆ ಎಂದರು. ಭಿನ್ನವತ್ತಲೆಯನ್ನು ವಾಚಿಸಿದ ಪಂ. ಭೀಮಸೇನಾಚಾರ್ಯ ಪಾಂಡುರಂಗಿ ಅವರು ಪೂಜ್ಯ ಜಗದ್ಗುರುಗಳ ಆಧ್ಯಾತ್ಮಿಕ, ಸಾಮಾಜಿಕ ಪಾಂಡಿತ್ಯವನ್ನು ವಿವರಿಸಿದ ನಂತರ ಅಭಿನಂದನಾ ಸಮಿತಿಯ ಸದಸ್ಯರು ಜಗದ್ಗುರುಗಳಿಗೆ ಭಿನ್ನವತ್ತಲೆ ಅರ್ಪಿಸಿದರು.

ಸ್ವಾಗತ ಸಮಿತಿಯ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಎಸ್.ಆರ್. ಪಾಟೀಲ, ಲೋಕಸಭೆ ಸದಸ್ಯ ಪಿ.ಸಿ. ಗದ್ದಿಗೌಡರ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ವಿವಿಧ ಸಮಾಜದ ಪ್ರಮುಖರು ಶ್ರೀಗಳಿಗೆ ಪುಷ್ಪಾರ್ಚನೆ ಮಾಡಿದರು. ಸ್ವಾಗತ ಸಮಿತಿಯ ಕಾರ್ಯದರ್ಶಿ ಡಾ. ಗಿರೀಶ ಮಾಸೂರಕರ ವಂದಿಸಿದರು. ಹಿರಿಯರಾದ ಶಿವರಾಮ ಹೆಗಡೆ ಹಾಗೂ ಶ್ರೀಮತಿ ಮಹಾದೇವಿ ಹೆಗಡೆ ಪೂರ್ಣಕುಂಭ ಸ್ವಾಗತ ನೀಡಿ ಜಗದ್ಗುರುಗಳನ್ನು ಬರಮಾಡಿಕೊಂಡರು.

ಡಾ. ಸಿ.ಎಸ್. ಪಾಟೀಲ, ಎಂ.ಎಸ್. ಜಿಗಜಿನ್ನಿ, ವಿಜಯ ಸುಲಾಖೆ, ಕೆ.ಎಂ. ಬಾದೋಡಗಿ, ಶ್ರೀನಿವಾಸ ಮನಗೂಳಿ, ಸಂದೀಪ ಕುಲಕರ್ಣಿ, ಬೋಕರೆ, ಸರಾಫ, ಹರಿ ಪಾಟೀಲ, ಎಸ್.ಬಿ. ಸತ್ಯನಾರಾಯಣ, ಸಿ.ಎನ್. ದಾಸ, ಕಿರಣ ಬಾಗಲಕೋಟ, ಗಣಪತಿ ಭಟï, ಮಹಿಳಾ ಮಂಡಳದ ಸದಸ್ಯರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಅನುಗ್ರಹ ಸಂದೇಶದ ನಂತರ ಶೃಂಗೇರಿ ಜಗದ್ಗುರುಗಳು ಚಂದ್ರಮೌಳೇಶ್ವರ ಸ್ವಾಮಿ ಪೂಜೆ ನೆರವೇರಿಸಿದರು.

ರವಿವಾರ ಬೆಳಿಗ್ಗೆ ಎರಡು ಸಾವಿರಕ್ಕೂ ಅಧಿಕ ಭಕ್ತರು ಪಾದಕ ಪೂಜೆ, ಭೀಕ್ಷಾ ವಂದನೆ, ವಸ್ತ್ರುಪೂಜೆಯಲ್ಲಿ ಭಾಗವಹಿಸಿ ಶ್ರೀಗಳಿಂದ ಫಲ, ಮಂತ್ರಾಕ್ಷತೆ ಸ್ವೀಕರಿಸಿದರು. ವಿವಿಧ ಸಮಾಜದ ಪ್ರಮುಖರು, ಗಣ್ಯರು ಪಾಲ್ಗೊಂಡಿದ್ದು ಸುರಪೂರದತ್ತ ತೆರಳಿದ ಜಗದ್ಗುರುಗಳನ್ನು ಬೀಳ್ಕೊಡಲಾಯಿತು. ಚಿದಂಬರ ಇನಾಂದಾರ, ಟಿ.ಎಚ್. ಕುಲಕರ್ಣಿ, ಜಿ.ಎನ್. ಕುಲಕರ್ಣಿ, ವಿ.ವೈ. ಕವಠೇಕರ ಮತ್ತಿತರರು ಉಪಸ್ಥಿತರಿದ್ದರು.

Shringeri,Jagadguru,vijayayatre,Bagalakote

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ