ಅನಂತ್‍ಕುಮಾರ್ ಅವರ ಹಠಾತ್‍ನಿಧನ ನನಗೆ ಆಘಾತ ತಂದಿದೆ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ

ಬೆಂಗಳೂರು, ನ.12-ಸ್ನೇಹಿತರಾದ ಅನಂತ್‍ಕುಮಾರ್ ಅವರ ಹಠಾತ್‍ನಿಧನ ನನಗೆ ಆಘಾತ ತಂದಿದೆ. ರಾಜ್ಯದ ಯಾವುದೇ ಜ್ವಲಂತ ಸಮಸ್ಯೆಗಳು ಎದುರಿಗೆ ಬಂದಾಗ ದೆಹಲಿ ಮಟ್ಟದಲ್ಲಿ ನನಗೆ ಸಹಕಾರ ನೀಡುತ್ತಿದ್ದವರು ಅನಂತ್‍ಕುಮಾರ್ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸ್ಮರಿಸಿದರು.

ಅನಂತ್‍ಕುಮಾರ್ ಅವರ ಅಂತಿಮ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು, ಅವರು ಹಿಂದೆ ಬೇರೆ ಪಕ್ಷಗಳಲ್ಲಿದ್ದರೂ ಕೂಡ ನನಗೆ ಸಹಕಾರ ನೀಡಿದ್ದರು. ಅವರು ಹೃದಯ ವೈಶಾಲ್ಯದಿಂದ ಜನರನ್ನು ಕಾಣುತ್ತಿದ್ದರು. ಅವರಿಗೆ ನನ್ನ ಗೌರವಪೂರ್ವಕ ನಮನಗಳು ಎಂದು ಹೇಳಿದರು.
ಮಾಜಿ ಸಚಿವ ಅಂಬರೀಶ್ ಮಾತನಾಡಿ, ಅನಂತ್‍ಕುಮಾರ್ ನನ್ನೊಂದಿಗೆ ತುಂಬಾ ಆತ್ಮೀಯವಾಗಿದ್ದರು. ನಾವು ಉತ್ತಮ ಸ್ನೇಹಿತರಾಗಿದ್ದೆವು. ರಾಜಕೀಯಕ್ಕಿಂತಲೂ ಮಿಗಿಲಾದ ಬಾಂಧವ್ಯ ನಮ್ಮ ನಡುವೆ ಇತ್ತು ಎಂದು ಹೇಳಿದರು.

ಅನಂತ್‍ಕುಮಾರ್ ಕರ್ನಾಟಕಕ್ಕಲ್ಲದೆ, ಇಡೀ ದೇಶಕ್ಕೆ ಉತ್ತಮ ನಾಯಕರಾಗಿದ್ದರು. ವಾಜಪೇಯಿ ಹಾಗೂ ಮೋದಿಯವರ ಸಂಪುಟದಲ್ಲಿ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜಾಫರ್ ಶರೀಫ್ ಹೇಳಿದರು.

ಜೆಡಿಎಸ್ ಯುವ ಮುಖಂಡ ಪ್ರಜ್ವಲ್ ರೇವಣ್ಣ, ಟಿ.ಎ.ಶರವಣ, ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ನಟಿಯರಾದ ಮಾಳವಿಕಾ, ತಾರಾ ಅನುರಾಧ, ಸಂಸದ ಎಲ್.ಆರ್.ಶಿವರಾಮೇಗೌಡ, ಶಾಸಕ ಎಂ.ಕೃಷ್ಣಪ್ಪ, ಮಾಜಿ ಸಚಿವ ಎಚ್.ಸಿ.ಮಹದೇವಪ್ಪ, ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೌಮ್ಯನಾಥಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಮೃತರ ಅಂತಿಮ ದರ್ಶನ ಪಡೆದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ