ಕೇಂದ್ರ ಸಚಿವ ಅನಂತ್ ಕುಮಾರ್ ನಿಧನಕ್ಕೆ ಪ್ರಧಾನಿ ಮೋದಿ ಅಶ್ರುತರ್ಪಣ

ಬೆಂಗಳೂರು, ನ.12- ಕೇಂದ್ರ ಸಚಿವ ಅನಂತ್ ಕುಮಾರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಅಗಲಿದ ಗೆಳೆಯನಿಗೆ ಕಂಬನಿಯ ಅಶ್ರುತರ್ಪಣ ಸಲ್ಲಿಸಿದ್ದಾರೆ.

ನನ್ನ ಸಹೋದ್ಯೋಗಿ ನಿಧನರಾಗಿರುವ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ಆಘಾತವಾಗಿದೆ. ಪಕ್ಷದ ನೇತಾರನಾಗಿದ್ದ ಅವರ ಸಾವು ನನಗೂ ಹಾಗೂ ನನ್ನ ಪಕ್ಷಕ್ಕೆ ತುಂಬಲಾರದ ನಷ್ಟ. ಸಂಸತ್‍ನಲ್ಲಿ ಯಾವುದೇ ವಿಷಯಗಳನ್ನು ಅತ್ಯಂತ ಎದೆಗಾರಿಕೆಯಿಂದ ಮಾತನಾಡುವ ಗುಣ ಬೆಳೆಸಿಕೊಂಡಿದ್ದ ಅನಂತ ಕುಮಾರ್ ಸಾವು ವೈಯಕ್ತಿಕವಾಗಿ ನನಗೆ ನೋವು ತಂದಿದೆ ಎಂದು ಕಂಬನಿ ಮಿಡಿದಿದ್ದಾರೆ.

ಅನಂತ್ ಕುಮಾರ್ ಜೀ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅವರ ಪತ್ನಿಯೊಂದಿಗೆ ಮಾತನಾಡಿದ್ದೇನೆ. ಅವರ ಸ್ನೇಹಿತರು, ಕುಟುಂಬದವರು ಹಾಗೂ ಬೆಂಬಲಿಗರಿಗೆ ದುಃಖವನ್ನು ಭರಿಸುವ ಶಕ್ತಿ ದೇವರು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಅನಂತ್ ಕುಮಾರ್ ಜೀ ಒಬ್ಬ ಸಮರ್ಥ ಆಡಳಿತಗಾರರಾಗಿದ್ದರು. ಅನೇಕ ಸಚಿವ ಖಾತೆಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದರು. ಬಿಜೆಪಿ ಸಂಘಟನೆಗೆ ದೊಡ್ಡ ಆಸ್ತಿಯಾಗಿದ್ದ ಅವರು ಕರ್ನಾಟಕದಲ್ಲಿ ವಿಶೇಷವಾಗಿ ಬೆಂಗಳೂರು ಸೇರಿದಂತೆ ಸುತ್ತಮುತ್ತ ಪಕ್ಷವನ್ನು ಸಂಘಟಿಸಲು ಬಹಳ ಶ್ರಮಪಟ್ಟಿದ್ದರು.
ನನ್ನ ಸಹೋದ್ಯೋಗಿ ಅನಂತ್ ಕುಮಾರ್ ಜೀ ಅವರ ಅಗಲಿಕೆಯಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಚಿಕ್ಕ ವಯಸ್ಸಿನಲ್ಲೇ ರಾಜಕೀಯ ಪ್ರವೇಶಿಸಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸತತ 6 ಬಾರಿ ಗೆದ್ದು ಬಂದಿದ್ದರು. ಅವರ ಶ್ರದ್ಧೆ ಮತ್ತು ಸಹಾನುಭೂತಿ ನಮಗೆಲ್ಲರಿಗೂ ಅನುಕರಣೀಯ ಎಂದು ಟ್ವೀಟ್ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ