ಕಾಂಗ್ರೆಸ್ ಪಕ್ಷ ನನಗೆ ನೀಡಿದ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ: ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ನ.6-ಚುನಾವಣೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಬಳ್ಳಾರಿಯಲ್ಲಿ ಯಾವುದೇ ಸಂಘರ್ಷ ಇಲ್ಲದೆ ಶಾಂತಿಯುತ ಚುನಾವಣೆ ನಡೆಯಲು ಸಹಕರಿಸಿದ ಶ್ರೀರಾಮುಲು ಅಣ್ಣ ಅವರಿಗೆ ಅಭಿನಂದನೆ ಹೇಳುವುದಾಗಿ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಉಪಚುನಾವಣೆ ಫಲಿತಾಂಶದ ಬಳಿಕ ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ನನಗೆ ನೀಡಿದ ಜವಾಬ್ದಾರಿಯನ್ನು ನಾನು ನಿಭಾಯಿಸಿದ್ದೇನೆ ಎಂದು ಹೇಳಿದರು.

ಚುನಾವಣೆಯ ಆರಂಭದಲ್ಲಿ ಶ್ರೀರಾಮುಲು ಅವರು ಶಾಂತಕ್ಕ ಪಾರ್ಲಿಮೆಂಟ್‍ಗೆ, ಡಿ.ಕೆ.ಶಿವಕುಮಾರ್ ಜೈಲಿಗೆ ಎಂದು ಹೇಳಿಕೊಂಡಿದ್ದರು. ಈಗ ಯಾರು ಎಲ್ಲಿಗೆ ಹೋಗಿದ್ದಾರೆ ಎಂದು ಜನ ತೀರ್ಮಾನಿಸಿದ್ದಾರೆ. ಹಣ, ಹೆಂಡ ಹಂಚಿ ಕಾಂಗ್ರೆಸ್ ಗೆದ್ದಿದೆ ಎಂದು ಫಲಿತಾಂಶದ ನಂತರ ಆರೋಪಿಸಲಾಗುತ್ತಿದೆ. ಬಿಜೆಪಿಯವರಿಗೆ ಮಾಹಿತಿ ಇದ್ದರೆ ಆರಂಭದಲ್ಲೇ ದೂರು ಕೊಟ್ಟು ಹಣ, ಹೆಂಡ ಹಂಚುವವರನ್ನು ಹಿಡಿಸಬಹುದಿತ್ತು. ಕಾಲ ಕಾಲಕ್ಕೆ ಪ್ರಚೋದನಾತ್ಮಕವಾಗಿ ಮಾತನಾಡಿ, ನಮ್ಮನ್ನು ಕೆರಳಿಸುವ ಪ್ರಯತ್ನ ಮಾಡಿದರು. ಆದರೆ ನಾವು ಅತ್ಯಂತ ಸಂಯಮದಿಂದ ವರ್ತಿಸಿದ್ದೇವೆ. ನಮ್ಮ ಕಾರ್ಯಕರ್ತರಿಗೂ ಕೂಡ ಶಾಂತ ರೀತಿಯಿಂದಿರಲು ಮನವಿ ಮಾಡಿಕೊಂಡಿದ್ದೆ ಎಂದು ಹೇಳಿದರು.

ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಈಗ ನಾವು ಗೆದ್ದಿರಬಹುದು, ಅವರು ಸೋತಿರಬಹುದು. ಅದು ಮುಖ್ಯವಲ್ಲ. ಒಂದು ಸಣ್ಣ ಘರ್ಷಣೆಯೂ ಆಗದಂತೆ ಶಾಂತಿಯುತವಾಗಿ ಚುನಾವಣೆ ನಡೆಯಲು ಶ್ರೀರಾಮುಲು ಅಣ್ಣ ಸಹಕರಿಸಿದ್ದಾರೆ, ಅದಕ್ಕಾಗಿ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು.
ಬಳ್ಳಾರಿ ವಿಷಯದಲ್ಲಿ ನನ್ನ ಬಾಂಬ್ ಒಂದೇ. ಅದು ಅಭಿವೃದ್ಧಿಯ ಬಾಂಬ್. ಬಳ್ಳಾರಿಯಲ್ಲಿ ಹಲವಾರು ರೀತಿಯ ಸವಾಲುಗಳಿವೆ. ಶುದ್ಧ ಕುಡಿಯುವ ನೀರು, ನಿರುದ್ಯೋಗ, ಜನರ ವಲಸೆ, ಧೂಳು ಸೇರಿ ಸಾಕಷ್ಟು ಸಮಸ್ಯೆಗಳಿವೆ. ಪರಿಹಾರ ಮಾಡಲು ಅವಕಾಶಗಳಿವೆ. 371(ಜೆ) ವಿಶೇಷ ಸ್ಥಾನಮಾನವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ನಾನು ಅದರತ್ತ ಗಮನ ಕೊಡುತ್ತೇನೆ ಎಂದರು.

ಬಳ್ಳಾರಿಯ ಜನ ಜಾತಿ, ಧರ್ಮದ ಭೇದ ಬಿಟ್ಟು ಚುನಾವಣೆ ನಡೆಸಿದ್ದಾರೆ. ಉಗ್ರಪ್ಪ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ನಮ್ಮ ಧ್ವನಿಯಾಗುತ್ತಾರೆ ಎಂಬ ವಿಶ್ವಾಸವಿಟ್ಟಿದ್ದೇವೆ. ಉಗ್ರಪ್ಪ ಅವರನ್ನು ಅಭ್ಯರ್ಥಿ ಮಾಡಬೇಕು ಎಂದು ಪ್ರಸ್ತಾಪಿಸಿದ್ದೇ ನಾನು. ಅದಕ್ಕೆ ರಾಹುಲ್‍ಗಾಂಧಿ ಸೇರಿದಂತೆ ಕಾಂಗ್ರೆಸ್‍ನ ಎಲ್ಲಾ ನಾಯಕರು ಸಹಕಾರ ನೀಡಿದರು ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗುತ್ತಾರೆ ಎಂದು ಶ್ರೀರಾಮುಲು ಅಣ್ಣ ಜಡ್ಜ್‍ಮೆಂಟ್ ನೀಡಿದ್ದರು. ಅವರ ಹೇಳಿಕೆ ನೋಡಿ ನನಗೆ ಆಶ್ಚರ್ಯವಾಗಿತ್ತು. ಶ್ರೀರಾಮುಲು ಯಾವಾಗ ನ್ಯಾಯಾಧೀಶರಾದರು? ಇತ್ತೀಚೆಗೆ 12 ಜನ ನ್ಯಾಯಾಧೀಶರು ಪ್ರಮಾಣವಚನ ಸ್ವೀಕರಿಸಿದಾಗ ಶ್ರೀರಾಮುಲು ಕೂಡ ಪ್ರಮಾಣ ವಚನ ತೆಗೆದುಕೊಂಡಿದ್ದರೆ ಎಂದು ಅನುಮಾನ ಕಾಡಿತ್ತು ಎಂದು ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದರು.

ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ. ಈಗ ನಮ್ಮ ಹಣೆಬರಹವನ್ನೇ ಜನ ನೋಡುತ್ತಿದ್ದಾರೆ. ಬಿಜೆಪಿ ಆಪರೇಷನ್ ಕಮಲ ಮಾಡುತ್ತೇವೆ, ಸರ್ಕಾರ ರಚಿಸುತ್ತೇವೆ ಎಂದು ಬ್ಯಾಗ್ ನೇತುಹಾಕಿಕೊಂಡು ತಿರುಗಾಡುತ್ತಿದೆ. ನಾವು ಯಾವುದೇ ಆಪರೇಷನ್ ನಡೆಸುವುದಿಲ್ಲ, ಬಿಜೆಪಿಯವರು ಏನು ಮಾಡುತ್ತಾರೋ ಮಾಡಲಿ ಕಾದು ನೋಡುತ್ತೇವೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ