ಹಿರಿಯ ನಟ ಅಮಿತಾಬ್ ಬಚ್ಚನ್ ಗೆ ವಕೀಲರ ಸಂಘದಿಂದ ನೋಟೀಸ್

ನವದೆಹಲಿ: ಎವರೆಸ್ಟ್ ಮಸಾಲಾ ಜಾಹೀರಾತಿನ ವಿವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೆ ದೆಹಲಿ ವಕೀಲರ ಸಂಘ ನೋಟಿಸ್ ಜಾರಿ ಮಾಡಿದೆ.

ಎವರೆಸ್ಟ್ ಮಸಾಲ, ಯುಟ್ಯೂಬ್ ಮತ್ತು ಮಾಧ್ಯಮ ಸಂಸ್ಥೆಯೊಂದಕ್ಕೂ ನೋಟಿಸ್ ನೀಡಲಾಗಿದೆ. ವಕೀಲರ ಉಡುಗೆಗಳನ್ನು ಬಳಸುವ ಮೊದಲು ತೆಗೆದುಕೊಳ್ಳಬೇಕಾದ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಂಡಿಲ್ಲ. ಪೂರ್ವಾಪರ ವಿವೇಚನೆಯಿಲ್ಲದೆ ಜಾಹೀರಾತು ಪ್ರಸಾರ ಮಾಡಿದ ಸಂಸ್ಥೆಗಳೂ ತಪ್ಪು ಮಾಡಿದೆ ಎಂದು ವಕೀಲರ ಸಂಘ ದೂರಿದೆ.

ವಕೀಲರ ಉಡುಗೆಗಳನ್ನು ಜಾಹೀರಾತಿಗೆ ಬಳಸುವ ಮೊದಲು ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿಲ್ಲ. ಅಧಿಕಾರ ಮತ್ತು ವಿವೇಚನೆ ಇಲ್ಲದೆ ಜಾಹೀರಾತು ನಿರ್ಮಿಸಿ, ಪ್ರಸಾರ ಮಾಡಿರುವ ನಿಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ಇಂಥ ಜಾಹೀರಾತುಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಈ ಕೂಡಲೇ ನಿಲ್ಲಿಸಬೇಕು. ಬಾರ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ದೇಶದ ಇತರೆಲ್ಲ ವಕೀಲರ ಸಂಘಗಳಿಗೆ ಇನ್ನು ಮುಂದೆ ವಕೀಲರ ಉಡುಗೆಗೆ ಅಗೌರವ ತೋರಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಬೇಕು’ ಎಂದು ಜಾಹೀರಾತಿನ ಪಾತ್ರಧಾರಿ ಮತ್ತು ನಿರ್ಮಾಣ ಸಂಸ್ಥೆಯನ್ನು ಬಾರ್ ಕೌನ್ಸಿಲ್ ಒತ್ತಾಯಿಸಿದೆ. ಅಲ್ಲದೇ 10 ದಿನಗಳ ಒಳಗೆ ನೋಟಿಸ್‌ಗೆ ಉತ್ತರ ನೀಡಬೇಕು ಎಂದು ತಿಳಿಸಿದೆ.

ಎವೆರೆಸ್ಟ್‌ ಮಸಾಲಾ ಗಾಗಿ ನಿರ್ಮಿಸಿದ ಜಾಹೀರಾತಿನಲ್ಲಿ ಅಮಿತಾಭ್ ಬಚ್ಚನ್ ಡ್ರೆಸ್ಸಿಂಗ್‌ ರೂಂನಲ್ಲಿ ವಕೀಲರ ಪಾತ್ರ ಧರಿಸಿ ಕುಳಿತಿರುತ್ತಾರೆ. ಇಬ್ಬರು ಕಿರಿಯ ಕಲಾವಿದರು, ಕೈದಿಯ ವೇಷದಲ್ಲಿರುವ ಒಬ್ಬ ಮತ್ತು ಪೊಲೀಸ್ ವೇಷದಲ್ಲಿರುವ ಮತ್ತೊಬ್ಬ ಡ್ರೆಸ್ಸಿಂಗ್‌ ರೂಂಗೆ ಹೋಗಿ ಅಮಿತಾಭ್ ಅವರಿಗೆ ಪಾವ್ ಭಾಜಿ ಕೊಡುತ್ತಾರೆ. ಊಟ ಮುಗಿದ ನಂತರ ಅಮಿತಾಭ್ ತಿನಿಸನ್ನು ಮತ್ತು ಅದನ್ನು ತಯಾರಿಸಲು ಬಳಸಿದ ಮಸಾಲೆಯನ್ನು ಹೊಗಳುತ್ತಾರೆ. ವಕೀಲರ ವೇಷದಲ್ಲಿರುವ ನಟ ಆ ವೃತ್ತಿಯ ಘನತೆಗೆ ತಕ್ಕಂತೆ ವರ್ತಿಸಿಲ್ಲ ಎಂದು ವಕೀಲರ ಸಂಘ ಆಕ್ಷೇಪಿಸಿದೆ.

Amitabh Bachchan, Bar Council of Delhi,issued, legal notice

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ