ಉತ್ತಮ ಆರೋಗ್ಯಕ್ಕೆ ನಿಗದಿತ ವ್ಯಾಯಾಮ ಮತ್ತು ಸಮತೋಲಿತ ಆಹಾರ ಪದ್ಧತಿ ಮುಖ್ಯ: ಡಾ.ಭಾರತಿ ವಿಷ್ಣುವರ್ಧನ್

ಬೆಂಗಳೂರು, ಅ.28- ಒತ್ತಡದ ಬದುಕಿನಿಂದ ಮುಕ್ತ ವಾಗಬೇಕಾದರೆ ನಿಗದಿತ ವ್ಯಾಯಾಮ ಮತ್ತು ಸಮತೋಲಿತ ಆಹಾರ ಪದ್ಧತಿ ರೂಢಿಸಿಕೊಳ್ಳುವುದು ಅಗತ್ಯ ಎಂದು ಪದ್ಮಶ್ರೀ ಡಾ.ಭಾರತಿ ವಿಷ್ಣುವರ್ಧನ್ ಹೇಳಿದ್ದಾರೆ.

ಗ್ಲೆನ್‍ಈಗಲ್ ಗ್ಲೋಬಲ್ ಆಸ್ಪತ್ರೆ ಹಾಗೂ ಗೋ ಗ್ರೀನ್ ಗೋ ಸೈಕ್ಲಿಂಗ್ ಆರ್ಗ್ ವತಿಯಿಂದ ನಗರದ ಕಬ್ಬನ್ ಪಾರ್ಕ್‍ನಲ್ಲಿಂದು ಏರ್ಪಡಿಸಿದ್ದ ಸ್ತನ ಕ್ಯಾನ್ಸರ್ ಜಾಗೃತಿ ಸೈಕ್ಲಾಥಾನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿಯಮಿತವಾಗಿ ಆರೋಗ್ಯ ತಪಾಸಣೆಗಳನ್ನು ಮಾಡಿಕೊಳ್ಳಬೇಕು. ವೈದ್ಯಕೀಯ ತಪಾಸಣೆಯನ್ನು ಕಡೆಗಣಿಸಬಾರದು. ವಿಶೇಷವಾಗಿ ಮಹಿಳೆಯರು ತಮ್ಮ ಆರೋಗ್ಯವನ್ನು ನಿರ್ಲಕ್ಷ್ಯಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಜೀವನಶೈಲಿ ಹಾಗೂ ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.

ಬಿಜಿಎಸ್ ಗ್ಲೆನ್‍ಈಗಲ್ಸ್ ಗ್ಲೋಬಲ್ ಹಾಸ್ಟಿಟಲ್‍ನ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞ ರಾದ ಡಾ. ಮೊನಿಕಾ ಪನ್ಸಾರಿ ಮಾತನಾಡಿ, ವಿಶ್ವ ಸ್ತನ ಕ್ಯಾನ್ಸರ್ ಜಾಗೃತಿ ಮಾಸವನ್ನು ಆಚರಿಸುತ್ತಿದ್ದೇವೆ. ನಿಗದಿತವಾಗಿ ಆರೋಗ್ಯ ಪರೀಕ್ಷೆಗಳನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.

ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೈಲಜಾ ಸುರೇಶ್ ಮಾತನಾಡಿ, ಸ್ತನ ಕ್ಯಾನ್ಸರ್ ಬಗ್ಗೆ ಅನುಮಾನ ಅಥವಾ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ವಹಿಸದೆ ವೈದ್ಯರನ್ನು ಸಂಪರ್ಕಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಿತ್ರನಟಿ ಅಭಿನಯ, ಫಿಟ್‍ನೆಸ್ ಪರಿಣಿತರಾದ ವನಿತಾ ಅಶೋಕ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಸೈಕ್ಲಾಥಾನ್‍ನಲ್ಲಿ 300ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ