ಟೆಂಡರ್‍ಶ್ಯೂರ್ ರಸ್ತೆಗಳಿಗೆ ಕೇಂದ್ರದ ಪ್ರಶಸ್ತಿ

ಬೆಂಗಳೂರು, ಅ.27- ನಗರದಲ್ಲಿ ಬಿಬಿಎಂಪಿ ವತಿಯಿಂದ ನಿರ್ಮಿಸಲಾಗುತ್ತಿರುವ ಟೆಂಡರ್‍ಶ್ಯೂರ್ ರಸ್ತೆಗಳು ಕೇಂದ್ರ ಸರ್ಕಾರದ ಶಹಭಾಷ್‍ಗಿರಿಗೆ ಪಾತ್ರವಾಗಿದ್ದು, ಪ್ರಶಸ್ತಿ ಪಡೆದುಕೊಂಡಿವೆ.

ವಿಶಾಲವಾದ ಪಾದಚಾರಿ ಮಾರ್ಗ, ಸೈಕಲ್ ಟ್ರ್ಯಾಕ್‍ಗಳನ್ನು ಒಳಗೊಂಡಿರುವ ಟೆಂಡರ್‍ಶ್ಯೂರ್ ರಸ್ತೆಗಳು ನಾನ್ ಮೋಟಾರೈಸ್ಡ್ ಟ್ರಾನ್ಸ್‍ಪೆÇೀರ್ಟ್ ವಿಭಾಗದಲ್ಲಿ ಕೇಂದ್ರ ಸರ್ಕಾರದ ಬೆಸ್ಟ್ ಕಮ್ಯಾಂಡಬಲ್ ಇನ್ಷಿಯೇಟಿವ್ ಪ್ರಶಸ್ತಿಗೆ ಪಾತ್ರರಾದರು.

ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಎಂಆರ್‍ಟಿ ಉಪ ಕಾರ್ಯದರ್ಶಿ ವಿ.ಎಸ್.ಪಾಂಡೆ ಅವರು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಪತ್ರ ಬರೆದು ಟೆಂಡರ್‍ಶ್ಯೂರ್ ರಸ್ತೆಗಳು ಪ್ರಶಸ್ತಿಗೆ ಪಾತ್ರವಾಗಿರುವುದನ್ನು ಖಚಿತಪಡಿಸಿದ್ದಾರೆ.
ಟೆಂಡರ್‍ಶ್ಯೂರ್ ರಸ್ತೆಗಳು ಪ್ರಶಸ್ತಿಗೆ ಭಾಜನವಾಗಿರುವುದನ್ನು ಸ್ವಾಗತಿಸಿರುವ ಮಂಜುನಾಥ್ ಪ್ರಸಾದ್ ಅವರು ಪರಿಸರ ಸ್ನೇಹಿ ಪಾದಚಾರಿ ಮಾರ್ಗ ಹಾಗೂ ಸೈಕಲ್ ಟ್ರ್ಯಾಕ್‍ಗಳನ್ನು ಒಳಗೊಂಡಿರುವುದಕ್ಕಾಗಿ ಈ ಪರಿಸರ ಸ್ನೇಹಿ ಪ್ರಶಸ್ತಿ ಲಭಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ನ.4ರಂದು ನಾಗಪುರದಲ್ಲಿ ನಡೆಯಲಿರುವ 11ನೆ ಭಾರತದಲ್ಲಿ ನಗರ ಚಲನಶೀಲತೆ ಸಮಾವೇಶ ಹಾಗೂ ಪ್ರದರ್ಶನ ಕಾರ್ಯಕ್ರಮದಲ್ಲಿ ಕೇಂದ್ರ ಇಂಧನ ಸಚಿವರು ಬಿಬಿಎಂಪಿಗೆ ಈ ಪ್ರಶಸ್ತಿ ನೀಡಲಿದ್ದಾರೆ.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಬಿಬಿಎಂಪಿ ಅಧಿಕಾರಿಗಳ ತಂಡ ಪ್ರಶಸ್ತಿ ಪಡೆಯಲು ನಾಗಪುರಕ್ಕೆ ತೆರಳುವ ಸಾಧ್ಯತೆ ಇದೆ.
ಈ ಹಿಂದೆ ಮೈಸೂರಿನ ಟ್ರಿಣ್ ಟ್ರಿಣ್ ಸೈಕಲ್ ಸೇವೆಗೂ ಕೇಂದ್ರ ಸರ್ಕಾರ ಶಹಭಾಷ್ ಗಿರಿ ನೀಡಿ ಪ್ರಶಸ್ತಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ