ಎಚ್1ಎನ್1 ಉಲ್ಭಣಕ್ಕೆ ಅತಿಯಾದ ಉಷ್ಣಾಂಶವೇ ಕಾರಣ…

ಬೆಂಗಳೂರು,ಅ.14-ನಗರದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಾರಣಾಂತಿಕ ಎಚ್1ಎನ್1 ರೋಗ ಉಲ್ಭಣಕ್ಕೆ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಏರಿಕೆಯಾಗಿದ್ದ ಅತಿಯಾದ ಉಷ್ಣಾಂಶವೇ ಪ್ರಮುಖ ಕಾರಣವಾಗಿದೆ.

2015-16 ಮತ್ತು 2017ರಲ್ಲಿ ಬೇಸಿಗೆ ಕಾಲದಲ್ಲಿ ಮಾತ್ರ ಎಚ್1ಎನ್1 ಕಾಣಿಸಿಕೊಂಡಿತ್ತು. ಆದರೆ ಕಳೆದ ಬೇಸಿಗೆಯಲ್ಲಿ ಎಚ್1ಎನ್1 ಕಾಣಿಸಿಕೊಂಡಿರಲಿಲ್ಲ. ಹಾಗಾಗಿ ಬಿಬಿಎಂಪಿ ಅಧಿಕಾರಿಗಳು ನೆಮ್ಮದಿಯ ನಿಟ್ಟುಸಿರುವ ಬಿಟ್ಟಿದ್ದರು.

ಈ ಬಾರಿ ರೋಗ ಲಕ್ಷಣ ಕಂಡುಬಂದಿಲ್ಲವೆಂದು ನೆಮ್ಮದಿಯಿಂದ ಇರುವಾಗಲೇ ರಾಜ್ಯದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಅತಿಯಾದ ಉಷ್ಣಾಂಶ ಉಂಟಾದುದ್ದರಿಂದ ಈ ಮಹಾಮಾರಿ ಮತ್ತೆ ದಾಂಗುಡಿ ಇಟ್ಟಿದೆ.

ಕೇವಲ ಒಂದು ತಿಂಗಳಲ್ಲೇ ಬರೋಬ್ಬರಿ 200 ಮಂದಿಗೆ ಎಚ್1ಎನ್1 ರೋಗ ಲಕ್ಷಣ ಕಾಣಿಸಿಕೊಂಡು 90 ಮಂದಿಗೆ ರೋಗ ತಗುಲಿರುವುದು ದೃಢಪಟ್ಟಿದೆ. ಬಿಬಿಎಂಪಿ ವ್ಯಾಪ್ತಿಯಲ್ಲೇ ಪ್ರತಿನಿತ್ಯ 50ಕ್ಕೂ ಹೆಚ್ಚು ಮಂದಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಅಕ್ಟೋಬರ್‍ನಲ್ಲೂ ರೋಗ ಉಲ್ಬಣವಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಕೆ ಕೈಗೊಂಡಿದೆ.

ಈಗಾಗಲೇ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ರೋಗ ಲಕ್ಷಣ:
ತೀವ್ರ ಸ್ವರೂಪದ ಜ್ವರ, ಕೆಮ್ಮು ಮತ್ತು ಹಳದಿ ಕಫ, ವಾಂತಿ ಬೇಧಿ, ನೆಗಡಿ ಮತ್ತು ಗಂಟಲು ಕೆರೆತ ಮತ್ತು ನೋವು ಅತಿಯಾದ ಮೈಕೈ ನೋವು, ಉಸಿರಾಟದ ತೊಂದರೆ ಎಚ್1ಎನ್1 ರೋಗದ ಲಕ್ಷಣಗಳು.

ಕ್ರಮಗಳು:
ಕೆಮ್ಮುವಾಗ, ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು. ಕಣ್ಣು , ಮೂಗು, ಬಾಯಿ ಮುಟ್ಟಿಕೊಳ್ಳುವ ಮುನ್ನ ಕೈಯನ್ನು ಸಾಬೂನಿನಿಂದ ಚೆನ್ನಾಗಿ ತೊಳೆಯಬೇಕು. ಚೆನ್ನಾಗಿ ನಿದ್ರೆ ಮಾಡಬೇಕು.

ದೈಹಿಕವಾಗಿ ಸದಾ ಚಟುವಟಿಕೆಯಿಂದ ಇರಬೇಕು, ಧಾರಾಳವಾಗಿ ನೀರು ಕುಡಿಯುವುದು, ಪೌಷ್ಟಿಕಾಂಶವಿರುವ ಆಹಾರ ಸೇವಿಸುವುದು, ಜನಸಂದಣಿ ಇರುವ ಸ್ಥಳಗಳಲ್ಲಿ ಮಾಸ್ಕ್ ಧರಿಸಿರುವುದು, ರೋಗ ಲಕ್ಷಣಗಳು ಇರುವ ವ್ಯಕ್ತಿಗಳಿಂದ ದೂರ ಇರುವುದು, ರಸ್ತೆಯಲ್ಲಿ ಎಲ್ಲೆಂದರಲ್ಲಿ ಉಗುಳುವುದನ್ನು ತಡೆಯಬೇಕು.
ಸಾರ್ವಜನಿಕರಿಗೆ ಇದೆಲ್ಲದರ ಬಗ್ಗೆ ಬಿಬಿಎಂಪಿ ಅರಿವು ಮೂಡಿಸುತ್ತಿದ್ದು, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ, ಮನೆಗಳ ಸುತ್ತಮುತ್ತ, ಮಾರುಕಟ್ಟೆ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಲು ಸಹಕರಿಸಬೇಕೆಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮನವಿ ಮಾಡಿದ್ದಾರೆ.

ಎಚ್1ಎನ್1 ರೋಗದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಹತ್ತಿರದ ಪಾಲಿಕೆ ಆಸ್ಪತ್ರೆ ಹಾಗೂ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ತಜ್ಞ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಕೋರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ