ದಸರಾ ವೀಕ್ಷಣೆಗೆ ಕೆಐಎಲ್ ನಿಂದ ಮೈಸೂರಿಗೆ ವಿಶೇಷ ವಿಮಾನ

ಬೆಂಗಳೂರು, ಅ.4- ವಿಶ್ವ ವಿಖ್ಯಾತ ಮೈಸೂರು ದಸರಾ ವೀಕ್ಷಣೆಗೆ ದೇಶ, ವಿದೇಶದ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ದಿ ನಿಗಮ ಹಾಗೂ ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಬೆಂಗಳೂರಿನಿಂದ ಮೈಸೂರಿಗೆ ಅಕ್ಟೋಬರ್ 10 ರಿಂದ 19ರವರೆಗೆ ವಿಶೇಷ ವಿಮಾನಯಾನ ವ್ಯವಸ್ಥೆಯನ್ನು ಕಲ್ಪಿಸಿದೆ.
ಈ ಸಂಬಂಧ ಕೆಎಸ್‍ಟಿಡಿಸಿ ಹಾಗೂ ಏರ್ ಇಂಡಿಯಾದ ಅಂಗ ಸಂಸ್ಥೆಯಾದ ಅಲಯನ್ಸ್ ಏರ್ ಸಂಸ್ಥೆಯ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಬೆಂಗಳೂರು ಹಾಗೂ ಮೈಸೂರಿನ ನಡುವೆ ವಿಶೇಷ ವಿಮಾನಯಾನ ಹಾರಾಡಲಿವೆ. ಪ್ರತಿ ದಿನ ಬೆOಗಳೂರು ಹಾಗೂ ಮೈಸೂರಿನ ನಡುವೆ 72 ಸೀಟುಗಳುಳ್ಳ ಎಟಿಆರ್ ವಿಮಾನಗಳು ಹಾರಾಟ ನಡೆಸಲಿವೆ.
ಪ್ರತಿ ದಿನ ಮಧ್ಯಾಹ್ನ 02:10 ನಿಮಿಷಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಆರಂಭವಾಗಲಿದೆ. ಮೈಸೂರಿನಿಂದ 03:30ಕ್ಕೆ ವಿಮಾನ, ಬೆಂಗಳೂರು ಕಡೆಗೆ ಪ್ರಯಾಣ ಆರಂಭಿಸಲಿದೆ.
ಟಿಕೆಟ್‍ಗಳು ರೂ.999 ರಿಂದ 15000(+ ತೆರಿಗೆ) ದರದಲ್ಲಿ ಸಿಗಲಿದೆ. ಎಲ್ಲಾ ಆನ್‍ಲೈನ್ ಟಿಕೆಟ್ ಬುಕ್ಕಿಂಗ್ ಕೇಂದ್ರಗಳಲ್ಲಿ ಟಿಕೆಟ್ ಲಭ್ಯವಿರುತ್ತವೆ.
ಕಳೆದೆರಡು ವರ್ಷಗಳಲ್ಲಿ ಕೆಎಸ್‍ಟಿಡಿಸಿ ಏಳು ಸೀಟುಗಳ ಆಕಾಶ ಅಂಬಾರಿ ಎಂಬ ಕೆಸೆನ್ನಾ ವಿಮಾನ ಸೇವೆಯನ್ನು ಒದಗಿಸಿತ್ತು. ಈ ವಿಮಾನಗಳು ಎಚ್‍ಎಎಲï ವಿಮಾನ ನಿಲ್ದಾಣದಿಂದ ಹೊರಡುತ್ತಿದ್ದವು. 72 ಸೀಟುಗಳ ವಿಮಾನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ನಡೆಸುವುದರಿಂದ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಈ ಪ್ರಯತ್ನಕ್ಕೆ ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಮೆಚ್ಚುಗೆ ವ್ಯಕ್ಛ್ತಪಡಿಸಿದ್ದು, ದಸರಾ ವೀಕ್ಷಣೆಗೆ ದೇಶ ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಇದು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ