ಎಲ್‍ಇಡಿ ಬೀದಿದೀಪ ಅಳವಡಿಕೆ ಯೋಜನೆ: ಸಿದ್ದರಾಮಯ್ಯ ಹಾಗೂ ಜಾರ್ಜ್ ವಿರುದ್ಧ ಕಿಕ್‍ಬ್ಯಾಕ್ ಆರೋಪ

ಬೆಂಗಳೂರು, ಸೆ.25- ಬೆಂಗಳೂರು ಮಹಾನಗರದಲ್ಲಿ ಎಲ್‍ಇಡಿ ಬೀದಿದೀಪ ಅಳವಡಿಸುವ ಯೋಜನೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಜೆ.ಜಾರ್ಜ್ ಅವರು ಸುಮಾರು 600 ಕೋಟಿ ರೂ. ಕಿಕ್‍ಬ್ಯಾಕ್ ಪಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಬಿಜೆಪಿ ನಗರ ವಕ್ತಾರ ಎನ್.ಆರ್.ರಮೇಶ್ ಈ ಸಂಬಂಧ ಲೋಕಾಯುಕ್ತ ಎಸಿಬಿ ಹಾಗೂ ಬಿಎಂಟಿಎಫ್‍ನಲ್ಲಿ ದೂರು ನೀಡಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಸುಮಾರು 170 ಪುಟಗಳ ದಾಖಲೆ ಬಿಡುಗಡೆ ಮಾಡಿರುವ ಅವರು, ನಗರದಲ್ಲಿ ಬೀದಿದೀಪ ಅಳವಡಿಸುವ 1600 ಕೋಟಿ ಹಗರಣದ ಈ ಯೋಜನೆಯ ಗುತ್ತಿಗೆ ಪಡೆದಿರುವ ಶಾಪುರ್‍ಜೀ, ಎಸ್‍ಎಂಸಿ ಇನ್ಫ್ರಾಸ್ಟ್ರಕ್ಚರ್ ಮತ್ತು ಸಮುದ್ರ ಎಲೆಕ್ಟ್ರಾನಿಕ್ಸ್ ಸಂಸ್ಥೆಗಳಿಂದ ಸಿದ್ದರಾಮಯ್ಯ ಹಾಗೂ ಜಾರ್ಜ್ ಅವರು ಚುನಾವಣೆಗಾಗಿ 600 ಕೋಟಿ ರೂ. ಮೊತ್ತದ ಕಿಕ್‍ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿರುವ ಅವರು ಈ ಸಂಸ್ಥೆಗಳ ವಿರುದ್ಧವೂ ದೂರು ದಾಖಲಿಸಿದ್ದಾರೆ.

ಗುತ್ತಿಗೆ ಪಡೆದಿರುವ ಸಂಸ್ಥೆಗಳ ಜತೆ ಜಾರ್ಜ್ ಅವರು ಅವಿನಾಭಾವ ಸಂಬಂಧ ಹೊಂದಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ 5.3 ಲಕ್ಷ ಬೀದಿ ದೀಪಗಳನ್ನು ಎಲ್‍ಇಡಿ ದೀಪವಾಗಿ ಬದಲಿಸಲು ಯೋಜನೆ ರೂಪಿಸಲಾಗಿತ್ತು. 2018ರ ವಿಧಾನಸಭೆ ಚುನಾವಣೆ ಘೊಷಣೆ ಮಾಡುವ ಎಂಟು ದಿನ ಮೊದಲು ಆತುರಾತುರವಾಗಿ ಇದಕ್ಕೆ ಅನುಮೋದನೆ ನೀಡಲಾಗಿದೆ. ಎಲ್‍ಇಡಿ ದೀಪ ಅಳವಡಿಸುವ ಮೂಲಕ ಹಣ ಉಳಿಸುವ ಯೋಜನೆ ಇದಾಗಿದೆ. ಪ್ರತಿ ತಿಂಗಳು ಪಾಲಿಕೆಗೆ 20 ಕೋಟಿ ರೂ.ಗಳ ಬಿಲ್ ಬರುತ್ತಿತ್ತು. ಎಲ್‍ಇಡಿ ಬಲ್ಪ್ ಅಳವಡಿಸಿದ್ದರಿಂದ 17 ಕೋಟಿ ಉಳಿಸಿದಂತಾಗುತ್ತದೆ. ಆದರೆ, 10 ವರ್ಷ ಟೆಂಡರ್ ನೀಡುತ್ತಿದ್ದು, 1600 ಕೋಟಿ ಲೂಟಿ ಹೊಡೆಯಲಾಗಿದೆ.

ಇದರ ಬದಲಾಗಿ ಪಾಲಿಕೆಯೇ ನೇರವಾಗಿ ಕೇವಲ 204 ಕೋಟಿ ಹಣದಲ್ಲಿ ಎಲ್‍ಇಡಿ ಬಲ್ಪ್‍ಗಳನ್ನು ಅಳವಡಿಸಬಹುದಾಗಿತ್ತು. ಆದರೆ, ಹಣ ಲೂಟಿ ಹೊಡೆಯಲು ಖಾಸಗಿ ಸಂಸ್ಥೆಗೆ ವಹಿಸಲಾಗಿದೆ ಎಂದು ರಮೇಶ್ ಆರೋಪಿಸಿದರು.
ಯೋಜನೆ ಅನುಷ್ಠಾನದ ಹೆಸರಿನಲ್ಲಿ ಕಿಕ್‍ಬ್ಯಾಕ್ ಪಡೆದಿರುವ ಸಚಿವ ಜಾರ್ಜ್ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಆಗ್ರಹಿಸಿದರು.

1600 ಕೋಟಿ ಮೊತ್ತದ ಬೃಹತ್ ಹಗರಣವನ್ನು ಸಿಬಿಐ ತನಿಖೆಗೆ ಮತ್ತು ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ವಹಿಸಬೇಕು. ಆತುರಾತುರವಾಗಿ ಟೆಂಡರ್ ಅನುಮೋದನೆ ನೀಡಿರುವುದು ಸ್ಪಷ್ಟವಾಗಿದ್ದು, ಇದನ್ನು ತಕ್ಷಣ ರದ್ದುಪಡಿಸಬೇಕು ಎಂದು ಹೇಳಿದರು.
ಪಾಲಿಕೆ ಆಯುಕ್ತರು ಮತ್ತು ಹಣಕಾಸು ವಿಭಾಗದ ವಿಶೇಷ ಆಯುಕ್ತರ ವಿವೇಚನಾರಹಿತ ನಿರ್ಧಾರದಿಂದಾಗಿ ಸಾವಿರಾರು ಕೋಟಿ ರೂ.ಗಳ ವಂಚನೆಯಾಗಿದೆ. ಅಲ್ಲದೆ, ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿರುವ ಶಾಪುರ್‍ಜೀ ಸಂಸ್ಥೆಗೆ ಕಾನೂನು ಬಾಹಿರವಾಗಿ ಟೆಂಡರ್ ನೀಡಲಾಗಿದೆ. ಎಲೆಕ್ಟ್ರಿಕಲ್ ಸಂಬಂಧಿತ ಕಾರ್ಯಗಳನ್ನು ನಿರ್ವಹಿಸಬೇಕೆಂಬ ನಿಯಮಗಳಿದ್ದರೂ ಇದರಲ್ಲಿ ಅನುಭವವೇ ಇಲ್ಲದ ಸಂಸ್ಥೆಗೆ ನಿಯಮ ಮೀರಿ ಟೆಂಡರ್ ಅನುಮೋದನೆ ನೀಡಲಾಗಿದೆ ಎಂದು ಆರೋಪಿಸಿದ ಅವರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಸರ್ಕಾರಿ ಸ್ವಾಮ್ಯದ ಕಿಯೋನಿಕ್ಸ್ ಸಂಸ್ಥೆಗೆ ಆರ್ಥಿಕ ಸಾಮಥ್ರ್ಯದ ನೆಪವೊಡ್ಡಿ ಟೆಂಡರ್ ಅನುಮೋದನೆ ನಿರಾಕರಿಸಲಾಗಿದೆ.

ಈ ಹಗಲು ದರೋಡೆ ಬಟಾ ಬಯಲಾಗಿದ್ದರೂ ಪ್ರಸ್ತುತ ಮೈತ್ರಿ ಸರ್ಕಾರ ಈ ಯೋಜನೆಗೆ ಅನುಮೋದನೆ ನೀಡಲು ಹೊರಟಿದೆ. ವಿಧಾನಸಭೆ ಚುನಾವಣೆ ಘೋಷಣೆಯಾಗುವ ಎಂಟು ದಿನ ಮುಂಚೆ ಆತುರಾತುರವಾಗಿ ನಡೆದ ಈ ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ