ಕ್ಯಾನೊಪಿ ಹೊಟೇಲ್ ಆರಂಭಕ್ಕೆ ನೀಡಿರುವ ಗುತ್ತಿಗೆ ರದ್ದು

ಬೆಂಗಳೂರು, ಸೆ.6- ಚದರ ಅಡಿಗೆ 20 ಸಾವಿರ ರೂ. ಬಾಡಿಗೆ ಇರುವ ಪ್ರದೇಶದಲ್ಲಿ ಕೇವಲ 20ರೂ.ನಂತೆ ಬಾಡಿಗೆಗೆ ನೀಡಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಕ್ಷಣವೇ ಜಂಟಿ ಆಯುಕ್ತರೊಂದಿಗೆ ಚರ್ಚಿಸಿ ಬಹುಮಹಡಿ ಕಟ್ಟಡದಲ್ಲಿ ಕ್ಯಾನೊಪಿ ಹೊಟೇಲ್ ಆರಂಭಕ್ಕೆ ನೀಡಿರುವ ಗುತ್ತಿಗೆಯನ್ನು ರದ್ದುಪಡಿಸಲಾಗುವುದು ಎಂದು ಇಂದಿಲ್ಲಿ ಭರವಸೆ ನೀಡಿದರು.
ಎಂಜಿ ರಸ್ತೆಯ ಬಹುಮಹಡಿ ಕಟ್ಟಡದಲ್ಲಿ ಕ್ಯಾನೊಪಿ ಹೊಟೇಲ್‍ಗೆ 20 ಸಾವಿರ ಚದರ ಅಡಿಯ ವಾಣಿಜ್ಯ ಸಂಕೀರ್ಣವನ್ನು ವಾರ್ಷಿಕ ಕೇವಲ 20ರೂ.ಗೆ ಗುತ್ತಿಗೆಗೆ ನೀಡಿರುವ ವರದಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
ಪತ್ರಿಕೆಯಲ್ಲಿ ಪ್ರಕಟವಾದ ಈ ವರದಿ ಗಮನಿಸಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಂಜುನಾಥ್ ಪ್ರಸಾದ್ ಈ ಕೂಡಲೇ ಇದಕ್ಕೆ ಸಂಬಂಧಪಟ್ಟ ಕಡತ ತರಿಸಿಕೊಂಡು ಕ್ಯಾನೊಪಿ ಹೊಟೇಲ್‍ಗೆ ನೀಡಿರುವ ಗುತ್ತಿಗೆ ರದ್ದುಪಡಿಸುವಂತೆ ಪೂರ್ವ ವಲಯ ಜಂಟಿ ಆಯುಕ್ತರಿಗೆ ಸೂಚನೆ ನೀಡುವುದಾಗಿ ಸುದ್ದಿಗಾರರಿಗೆ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ