ಗೌರಿಲಂಕೇಶ್ ಗೆ ಗುಂಡಿಕ್ಕಿ ಹತ್ಯೆ ಮಾಡಿದ್ದು ಪರಶುರಾಮ್ ವಾಗ್ಮೋರೆ: ಎಫ್‍ಎಸ್‍ಎಲ್ ವರದಿ ಸಾಬೀತು

ಬೆಂಗಳೂರು, ಸೆ.4- ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿಲಂಕೇಶ್ ಅವರ ಹಣೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದೇ ಪರಶುರಾಮ್ ವಾಗ್ಮೋರೆ ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‍ಎಸ್‍ಎಲ್) ವರದಿಯಿಂದ ಸಾಬೀತಾಗಿದೆ.
2017 ಸೆಪ್ಟೆಂಬರ್ 5ರ ರಾತ್ರಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಗೌರಿ ನಿವಾಸದ ಬಳಿ ಕಪ್ಪುಬಣ್ಣದ ಪಲ್ಸರ್ ಬೈಕ್‍ನಲ್ಲಿ ಬಂದ ಇಬ್ಬರು ಗುಂಡಿಕ್ಕಿ ಹತ್ಯೆಗೈದು ಪರಾರಿಯಾಗಿದ್ದರು.

ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳು, ವಿಶೇಷ ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದ ಕೆಲವು ಶಂಕ್ಯಾಸ್ಪದ ವಸ್ತುಗಳು ಮತ್ತು ಮರಣೋತ್ತರ ಪರೀಕ್ಷೆ ವರದಿಯನ್ನು ಗುಜರಾತ್‍ನಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು.
ಇದೀಗ ಎಫ್‍ಎಸ್‍ಎಲ್ ಅಧಿಕಾರಿಗಳು ನೀಡಿರುವ ಅಂತಿಮ ವರದಿಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಪಲ್ಸರ್ ಬೈಕ್ ಹಿಂಭಾಗದಲ್ಲಿ ಕುಳಿತಿದ್ದ ವ್ಯಕ್ತಿಯೇ ಹಣೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂದು ವರದಿ ನೀಡಲಾಗಿದೆ.
ಈ ವರದಿ ಅನುಸಾರ ಎಸ್‍ಐಟಿ ಅಧಿಕಾರಿಗಳು ವಿಜಾಪುರ ಜಿಲ್ಲೆ ಸಿಂಧಗಿ ತಾಲ್ಲೂಕಿನ ಪರಶುರಾಮ್ ವಾಗ್ಮೋರೆಯೇ ಗೌರಿಲಂಕೇಶ್ ಹತ್ಯೆಯ ಪ್ರಮುಖ ಆರೋಪಿ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಪಲ್ಸರ್ ಬೈಕ್‍ನಲ್ಲಿ ಬಂದಿದ್ದ ಆರೋಪಿಗಳು ಯಾರಿಗೂ ಕಾಣದಂತೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ತಲೆಗೆ ಹೆಲ್ಮೆಟ್ ಧರಿಸಿದ್ದರು. ಇನ್ನು ತಾವು ಹಾಕಿದ್ದ ಬಟ್ಟೆಗಳು ಕೂಡ ಯಾರೂ ಪತ್ತೆ ಮಾಡಬಾರದೆಂಬ ಕಾರಣಕ್ಕಾಗಿ ಶರ್ಟ್ ಮೇಲೆ ಜರ್ಕೀನ್ ಧರಿಸಿದ್ದರಲ್ಲದೆ, ಕಣ್ಣಿಗೆ ಕೂಲಿಂಗ್‍ಕ್ಲಾಸ್, ಕೈಗಳಿಗೆ ಗ್ಲೌಸ್‍ಗಳನ್ನು ಧರಿಸಿದ್ದರು.
ಗುಜರಾತ್‍ನಲ್ಲಿರುವ ಪ್ರಯೋಗಾಲಯವು ದೇಶದಲ್ಲೇ ಅತ್ಯುತ್ತಮವಾಗಿದ್ದು, ಇಲ್ಲಿ ಮುಂದುವರೆದ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದರಿಂದ ಎಂಥಹದ್ದೇ ಪ್ರಕರಣಗಳನ್ನು ಭೇದಿಸ ಬಹುದಾಗಿದೆ. ಗೌರಿ ಪ್ರಕರಣ ಭೇದಿಸಲು ತನಿಖಾಧಿಕಾರಿಗಳು ಇದೇ ತಂತ್ರಜ್ಞಾನವನ್ನು ಬಳಸಿಕೊಂಡಿದ್ದಾರೆ.
ಸದ್ಯ ತನಿಖಾಧಿಕಾರಿಗಳ ವಶದಲ್ಲಿರುವ ಪರಶುರಾಮ್ ವಾಗ್ಮೋರೆ ಸೇರಿದಂತೆ ಎಲ್ಲಾ ಆರೋಪಿಗಳ ವಿರುದ್ಧ ಸದ್ಯದಲ್ಲೇ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ (ಚಾರ್ಜ್‍ಶೀಟ್) ಸಲ್ಲಿಸಲು ಮುಂದಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ