ದೇಶದ ಹದಗೆಟ್ಟ ಆರ್ಥಿಕತೆಗೆ ಕೇಂದ್ರವೇ ಹೊಣೆ: ಖರ್ಗೆ

ಹುಬ್ಬಳ್ಳಿ: ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳಿಂದ ದೇಶದ ಆರ್ಥಿಕತೆ ಹದಗೆಟ್ಟಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯಲು ಕೇಂದ್ರ ಸರ್ಕಾವೇ ಹೊಣೆ ಎಂದು ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ಮಾಡಿದ್ರು. ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಸ್ತುತ ದೇಶದ ಜಿಡಿಪಿಯು 8.2 ರಷ್ಟು ಇದೆ ಎಂದು ಕೇಂದ್ರ ಕೊಚ್ಚಿಕೊಳ್ಳುತ್ತಿದೆ. ಆದರೆ, ಅವರದ್ದೇ ಸರ್ವೆಯಲ್ಲಿ ಅದು 7.2ಅಂತ ದಾಖಲಾಗಿದೆ. ನಮ್ಮ ಅಧಿಕಾರಾವಧಿಯಲ್ಲಿ ಕಚ್ಚಾ ತೈಲದ ಬೆಲೆ ಜಾಸ್ತಿ ಇದ್ರೂ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿರಲಿಲ್ಲ. ಈಗ ಡೀಸೆಲ್ ಬೆಲೆಯೇ 70ರ ಗಡಿ ದಾಟಿದೆ ಎಂದರು. ತೈಲ ಬೆಲೆ ಏರಿಕೆಯಿಂದ ರೈತ ಸಂಕಷ್ಟಕ್ಕೀಡಾಗಿದ್ದಾನೆ. ರೈತರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಳಜಿ ಇಲ್ಲ. ತಪ್ಪು ಆರ್ಥಿಕ ನೀತಿಯಿಂದ ಕೇಂದ್ರ ಮನ ಬಂದಂತ ಹಣ ವ್ಯಯಿಸುತ್ತಿದೆ. ಯುವಕರಿಗೆ ಉದ್ಯೋಗ ಕೊಡಿಸುವಲ್ಲಿ ಕೇಂದ್ರ ವಿಫಲವಾಗಿದೆ. 2ಕೋಟಿ ನಿರುದ್ಯೋಗಿಗಳಿಗೆ ನೌಕರಿ ಕೊಡುವ ಭರವಸೆ ಹುಸಿಯಾಗಿದೆ ಎಂದರು. ಆರ್ಥಿಕವಾಗಿ, ಸಾಮಾಜಿಕವಾಗಿ ಮೋದಿ ಸರ್ಕಾರ ದೇಶ ಹಾಳು ಮಾಡುತ್ತಿದೆ. ಸಂವಿಧಾನ, ಪ್ರಜಾ ಪ್ರಭುತ್ವಕ್ಕೆ ಕೇಂದ್ರ ಬೆಲೆಯೇ ಕೊಡುತ್ತಿಲ್ಲ ಎಂದು ಕೇಂದ್ರ ಸರ್ಕಾರದ ‌ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ