ಕ್ರಾಂತಿಕಾರಿ ಜೈನ ಮುನಿ ತರುಣ್ ಸಾಗರ್ ಇನ್ನಿಲ್ಲ

ನವದೆಹಲಿ: ಕ್ರಾಂತಿಕಾರಿ ಜೈನಮುನಿ ತರುಣ್ ಸಾಗರ್ ಇಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ವಿಧಿವಶರಾಗಿದ್ದಾರೆ.

51 ವರ್ಷ ವಯಸ್ಸಿನ ಮುನಿ ನವದೆಹಲಿಯ ಕೃಷ್ಣ ನಗರದ ರಾಧಾಪುರಿ ಜೈನ ಆಶ್ರಮದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಜಾಂಡೀಸ್ ಹಾಗೂ ಇತರ ಕೆಲ ಕಾಯಿಲೆಗಳಿಂದ ಬಳುತ್ತಿದ್ದ ಸಾಗರ್ ಅವರು, ಕಳೆದ 3 ವಾರಗಳಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ತೀರಾ ಹದಗೆಟ್ಟಿದ್ದರೂ ಕಳೆದ ಎರಡು ದಿನಗಳಿಂದ ಔಷಧವನ್ನೂ ಸೇವಿಸದೆ ಇದ್ದರು. ಜೊತೆಗೆ ಜೈನ ಮಂದಿರಕ್ಕೆ ತಮ್ಮನ್ನು ಕರೆದೊಯ್ಯುವಂತೆ ಅವರೇ ಒತ್ತಾಯಿಸಿದ ಹಿನ್ನೆಲೆಯಲ್ಲಿ ಅವರನ್ನು ಜೈನ ಮಂದಿರಕ್ಕೆ ಕರೆದುಕೊಂಡು ಬರಲಾಗಿತ್ತು.

ಜೈನ ಸಮುದಾಯದಲ್ಲಿ ಅನುಯಾಯಿಗಳನ್ನು ಹೊಂದಿರುವ ಮುನಿ ತರುಣ್ ಸಾಗರ್ ಜಾಂಡೀಸ್ ನಿಂದ ಬಳಲುತ್ತಿದ್ದರು. ಅನಾರೋಗ್ಯದ ಕಾರಣದಿಂದ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಮೂರು ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಮುನಿಯ ಅಂತಿಮ ವಿಧಿ ವಿಧಾನಗಳು ಇಂದು ಉತ್ತರ ಪ್ರದೇಶದ ತರುಣಸಾಗರಂ ನಲ್ಲಿ ನಡೆಯಲಿದೆ. ಸದ್ಯ ಮುನಿಯವರ ಅಕಾಲಿಕ ನಿಧನಕ್ಕೆ ಕೇಂದ್ರ ಸಚಿವರು ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

1967 ರ ಜೂನ್ 26ರಂದು ಮಧ್ಯ ಪ್ರದೇಶದ ದಾಹೋಹ್ ಜಿಲ್ಲೆಯಲ್ಲಿ ಜನಿಸಿದ ಪವನ್ ಕುಮಾರ್ ಜೈನ್ 1981 ರಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದರು. ತಮ್ಮ ಭಾಷಣಗಳ ಮೂಲಕವೇ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ