ಕೊಡುಗು ಪುನರ್‍ವಸತಿ ಬಗ್ಗೆ ಪ್ರತಿಕ್ರಿಯಿಸದೆ ನುಣಚಿಕೊಂಡು ಹೋದ ಸಚಿವ ಅನಂತ್‍ಕುಮಾರ್ ಹೆಗಡೆ

 

ಬೆಂಗಳೂರು, ಆ.25- ನೆರೆ ಹಾವಳಿಯಿಂದ ಸಂಕಷ್ಟಕ್ಕೀಡಾಗಿರುವ ಕೊಡುಗು ಜಿಲ್ಲೆಯ ಪುನರ್‍ವಸತಿ ಬಗ್ಗೆ ಪ್ರತಿಕ್ರಿಯಿಸದೆ ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ ನುಣಚಿಕೊಂಡು ಹೋದ ಪ್ರಸಂಗ ನಡೆಯಿತು.
ನಗರದ ಖಾಸಗಿ ಹೋಟೆಲ್‍ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವರು ನಂತರ ಸುದ್ದಿಗಾರರ ಜತೆ ಕೌಶಲ್ಯಾಭಿವೃದ್ಧಿಯ ಬಗ್ಗೆ ಮಾತನಾಡಿದರು.

ಇದೇ ಸಂದರ್ಭದಲ್ಲಿ ಕೊಡಗು ಜಿಲ್ಲೆಯಲ್ಲಿ ಉಂಟಾಗಿರುವ ನೆರೆ ಹಾವಳಿಯ ಬಗ್ಗೆ ಪ್ರಶ್ನೆ ಕೇಳಿದಾಗ ಉತ್ತರಿಸಲು ನಿರಾಕರಿಸಿ ನಿರ್ಗಮಿಸಲು ಮುಂದಾದರು.
ಆದರೂ ಪಟ್ಟು ಬಿಡದೆ ವರದಿಗಾರರು ಸಚಿವರಿಂದ ಉತ್ತರ ಬಯಸಿದಾಗ ದಾರಿಗೆ ಅಡ್ಡ ಬರಬೇಡಿ ಎಂದು ನಿಷ್ಟೂರವಾಗಿ ಹೇಳಿ ನುಣುಚಿಕೊಂಡು ಹೋದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್, ಕೊಡಗು ಜಿಲ್ಲೆಯಲ್ಲಿ ಮಳೆಯಿಂದಾಗಿ 3 ಸಾವಿರ ಕೋಟಿಯಷ್ಟು ನಷ್ಟವಾಗಿರುವ ಪ್ರಾಥಮಿಕ ಅಂದಾಜಿದೆ ಎಂದು ಹೇಳಿದರು.

ಇಡೀ ಜಿಲ್ಲೆಯನ್ನು ಮರು ನಿರ್ಮಾಣ ಮಾಡುವ ಅಗತ್ಯವಿದೆ. ಕೇಂದ್ರ ಸರ್ಕಾರ ಸೂಕ್ತ ರೀತಿಯಲ್ಲಿ ಪರಿಹಾರ ನೀಡಬೇಕು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಮಡಿಕೇರಿಯಲ್ಲಿ ನಡೆದುಕೊಂಡ ರೀತಿ ಸರಿಯಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕೊಡಗು ಸಂತ್ರಸ್ತರಿಗೆ ಸರ್ಕಾರಿ ನೌಕರರ ಒಂದು ದಿನದ ವೇತನ ಸೇರಿ ಸುಮಾರು 40 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುತ್ತಿದೆ. ಕೊಡಗು ಜಿಲ್ಲೆಯ ಶಾಲಾ , ಕಾಲೇಜುಗಳ ದುರಸ್ತಿ ಕಾರ್ಯಕ್ಕೆ ಸುಮಾರು 3ರಿಂದ 4 ಕೋಟಿ ಬೇಕು. 40 ಕೋಟಿಯಲ್ಲಿ 4 ಕೋಟಿಯನ್ನು ಶಿಕ್ಷಣ ಇಲಾಖೆಗೆ ನೀಡುವಂತೆ ನಾವು ಮನವಿ ಮಾಡಿದ್ದೇವೆ ಎಂದರು.

ಡೊನೇಷನ್ ಹಾವಳಿಗೆ ಕಡಿವಾಣ:
ಶಿಕ್ಷಣ ಎಂಬುದು ಸೇವಾ ಕ್ಷೇತ್ರ. ಆದರೆ, ಅದು ವ್ಯಾಪಾರೀಕರಣವಾಗಿದೆ. ಖಾಸಗಿ ಶಾಲೆಗಳು ಎಲ್‍ಕೆಜಿ ಪ್ರವೇಶಕ್ಕೆ 5ಲಕ್ಷ ಹಣ ಪಡೆಯುತ್ತಿವೆ. ಮುಂದಿನ ದಿನಗಳಲ್ಲಿ ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ. ವಿದ್ಯಾಭ್ಯಾಸಕ್ಕೆ ಎಷ್ಟು ಖರ್ಚಾಗುತ್ತದೆ ಎಂಬ ಮಾಹಿತಿ ಎಲ್ಲಿರಿಗೂ ಪರಿಚಯವಿದೆ. ಅದನ್ನು ಆಧರಿಸಿ ಎಷ್ಟು ಶುಂಲ್ಕ ಪಡೆಯಬೇಕು ಎಂಬುದನ್ನು ನಿರ್ಧಾರ ಮಾಡಿ ಅದನ್ನು ಶಾಲೆಗಳ ನೋಟಿಸ್ ಬೋರ್ಡ್‍ನಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುವ ಚಿಂತನೆ ಇದೆ. ಒಂದು ವೇಳೆ ಅದನ್ನು ಮೀರಿದರೆ ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಮಟ್ಟಗಳಲ್ಲಿ ಸಮಿತಿಗಳು ಇವೆ ಎಂದು ಹೇಳಿದರು.
ವಿದ್ಯಾರ್ಥಿಗಳ ಬಸ್‍ಪಾಸ್ ಕುರಿತಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅವರು ಶೀಘ್ರವೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಶಾಲೆಗಳಿಗೆ ಭೇಟಿ ನೀಡಿದಾಗ ಮಕ್ಕಳು ಧರಿಸಿದ್ದ ಶೂಗಳ ಗುಣಮಟ್ಟವನ್ನು ಕೂತಹಲಕ್ಕಾಗಿ ಪರಿಶೀಲಿಸುತ್ತಿದ್ದೇನೆ. ವಿದ್ಯಾವಿಕಾಸ ಯೋಜನೆ ಅನುಷ್ಟಾನ ಜವಾಬ್ದಾರಿಯನ್ನು ಸ್ಥಳೀಯ ಶಾಲಾಭಿವೃದ್ಧಿ ಸಮಿತಿಗಳಿಗೆ ನೀಡಲಾಗಿದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶೂಗಳು ಸಿಗುತ್ತಿವೆಯೇ ಎಂಬುದನ್ನು ಪರಿಶೀಲಿಸಿದ್ದೇನೆ. ಅದರ ಹೊರತಾಗಿ ಯಾವುದೇ ದೂರುಗಳು ಈವರೆಗೂ ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ