ಜೀವ ವೈವಿಧ್ಯತೆಗೆ ಧಕ್ಕೆ ಉಂಟಾಗಿರುವುದೇ ಕೇರಳ ಪ್ರಕೃತಿ ವಿಕೋಪಕ್ಕೆ ಕಾರಣ: ನಿರ್ಮಲಾನಂದನಾಥ ಸ್ವಾಮೀಜಿ

 

ಬೆಂಗಳೂರು, ಆ.20- ಜೀವ ವೈವಿಧ್ಯತೆಗೆ ಧಕ್ಕೆ ಉಂಟಾಗಿರುವುದೇ ಕೇರಳದಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪಕ್ಕೆ ಕಾರಣ ಎಂದು ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಬೆಂಗಳೂರು ವಿಶ್ವ ವಿದ್ಯಾಲಯದ ಎಚ್.ಎನ್.ಸಭಾಂಗಣದಲ್ಲಿ ವಿಶ್ವ ಒಕ್ಕಲಿಗರ ಮಹಾವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾತೃಶ್ರೀ ಸ್ವರೂಪಿ ಪ್ರಕೃತಿಯು, ಮನುಜನೂ ಸೇರಿದಂತೆ ಸಕಲ ಚರಾಚರ ಜೀವಿಗಳನ್ನು ಸಲಹುತ್ತಿದೆ. ಸ್ವಾರ್ಥ ಮನೋಭಾವದ ಮನುಜ ಅದೇ ಪ್ರಕೃತಿಯ ಒಡಲಿಗೆ ನಿರಂತರ ಘಾಸಿ ಮಾಡುತ್ತಿದ್ದಾನೆ. ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಮತ್ತಷ್ಟು ಆತಂಕಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಕೃತಿ ಮತ್ತು ಮನುಜನ ದೈಹಿಕ ರಚನೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಪಂಚಭೂತಗಳು ಪರಸ್ಪರ ನಿರ್ದಿಷ್ಟ ಪ್ರಮಾಣದಲ್ಲಿ ಅರಿತು ಬೆರೆತು ಒಂದು ಸುಂದರ ಲೋಕ ರೂಪುಗೊಂಡಿದೆ. ಪಂಚಭೂತಗಳ ಈ ಪ್ರಮಾಣದಲ್ಲಿ ಏರು ಪೇರಾದರೆ ದೇಹಕ್ಕೆ ಕಾಯಿಲೆ ಬರುವಂತೆ ಪ್ರಕೃತಿಯಲ್ಲೂ ಬದಲಾವಣೆಗಳು ಕಂಡು ಬರುತ್ತದೆ. ಈ ಬದಲಾವಣೆ ಮನುಷ್ಯ ಸಂಕುಲವನ್ನೇ ನಡುಗಿಸಿಬಿಡುತ್ತದೆ ಎಂದು ಹೇಳಿದರು.
ನಿರ್ದಿಷ್ಟ ಸಮಾಜದ ಹೆಸರಿನಲ್ಲಿ ಒಗ್ಗಟ್ಟಾದರೂ ಇಡೀ ಸಮುದಾಯ ಒಳಿತು ಸಂಘಟನೆಯ ಮೂಲಭೂತ ಗುರಿಯಾಗಬೇಕು. ಇದೇ ಸತ್ಸಂಗದ ಮೂಲ ಉದ್ದೇಶ ಎಂದು ತಿಳಿಸಿದರು.
ಇದೇ ವೇಳೆ ಹಲವು ಶ್ಲೋಕ ಹಾಗೂ ಮಂತ್ರಗಳನ್ನು ಪಠಿಸಿದ ಶ್ರೀಗಳು ನೆರೆದಿದ್ದ ಸಭಿಕರಿಗೆ ಸಂಸ್ಕøತ ಶ್ಲೋಕಗಳನ್ನು ಅರ್ಥ ಸಹಿತವಾಗಿ ಹೇಳಿಕೊಟ್ಟರು.
ಶಾಸಕ ಎಸ್.ಟಿ.ಸೋಮಶೇಖರ್, ಬೆಂಗಳೂರು ವಿ.ವಿ.ಕುಲಪತಿ ಪೆÇ್ರ.ಕೆ.ಆರ್. ವೇಣುಗೋಪಾಲ್, ಟಿ.ಎ.ನಾರಾಯಣಗೌಡ, ಹನುಮಂತೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ