ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಡಿ ಬಾಸ್‌ಗೆ ನಾನು ಆಭಾರಿ: ಸಾಹಸ ನಿರ್ದೇಶಕ ವಿನೋದ್

ಚಿತ್ರರಂಗದಲ್ಲಿ ಯಾರ ಬೆಂಬಲವಿಲ್ಲದೆ ಬೆಳೆಯುವುದು, ಗುರುತಿಸಿಕೊಳ್ಳುವುದು ಕಷ್ಟ. ಇಂತಹ ಸಂದರ್ಭದಲ್ಲಿ ನನ್ನನ್ನು ಪ್ರೋತ್ಸಾಹಿಸಿದ ಡಿ ಬಾಸ್ ದರ್ಶನ್ ಅವರಿಗೆ ನಾನು ಆಭಾರಿ ಎಂದು ಸಾಹಸ ನಿರ್ದೇಶಕ ವಿನೋದ್ ಕುಮಾರ್ ಹೇಳಿದ್ದಾರೆ.
ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್‌ಪೆಕ್ಟರ್ ವಿಕ್ರಂ ಚಿತ್ರಕ್ಕೆ ವಿನೋದ್ ಕುಮಾರ್ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ಭಗತ್ ಸಿಂಗ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ದರ್ಶನ್ ಅವರಿಗೆ ಸಾಹಸ ನಿರ್ದೇಶನ ಮಾಡಿದ ವಿನೋದ್ ಅವರು ತಮ್ಮ ಚಿತ್ರರಂಗದ ಬದುಕಿನ ಬಗ್ಗೆ ಮೆಲುಕು ಹಾಕಿದರು.
ನಾನು 19 ವರ್ಷಕ್ಕೆ ಫೈಟ್ ಮಾಸ್ಟರ್ ಆಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ಸಾಹಸ ನಿರ್ದೇಶಕ ಕೆಡಿ ವೆಂಕಟೇಶ್ ಅವರು ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಅವರೇ ನನಗೆ ಗುರು ಮತ್ತು ಗಾಡ್ ಫಾದರ್. 16 ವರ್ಷಗಳಿಂದ ನಾನು ಚಿತ್ರರಂಗದಲ್ಲಿ ಕೆಲಸ ಮಾಡುತ್ತಾ ಬಂದಿದ್ದೇನೆ. ಮೊದಲ ಏಳು ವರ್ಷ ಫೈಟ್ ಮಾಸ್ಟರ್ ಆಗಿದೆ. ಕಳೆದ ಮೂರು ವರ್ಷಗಳಿಂದ ನಾನು ಸ್ವತಂತ್ರ ಸಾಹಸ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದು ಅದಕ್ಕೂ ಮುನ್ನ ಸಹಾಯಕ ಸಾಹಸ ನಿರ್ದೇಶಕನಾಗಿ ಕೆಲಸ ಮಾಡಿದ್ದೇ ಎಂದು ವಿನೋದ್ ಕುಮಾರ್ ಹೇಳಿದ್ದಾರೆ.
ದುನಿಯಾ ವಿಜಯ್ ಅಭಿನಯದ ಜಯಮ್ಮನ ಮಗ ಚಿತ್ರದಲ್ಲಿ ಕೆಲಸ ಮಾಡಿದ್ದೇನೆ. ನಾನು ದರ್ಶನ್ ಜೊತೆ ಸುಮಾರು 10 ಚಿತ್ರಗಳಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಅವರು ಶಾಂತ ಸ್ವಭಾವದ ನಟ. ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಾರೆ. ದರ್ಶನ್ ಹಾಗೂ ಇತರ ನಟರ ಆಶೀರ್ವಾದ ನಾನು ಈ ಮಟ್ಟಕ್ಕೆ ಬೆಳೆಯಲು ಸಹಾಯವಾಗಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ