ಕೇವಲ ಸಿಎಂ ಗೆ ಮಾತ್ರ ಸೀಮಿತವಾದ ದುಂದುವೆಚ್ಚಕ್ಕೆ ಕಡಿವಾಣ ಕ್ರಮ

 

ಬೆಂಗಳೂರು, ಆ.12-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಅಧಿಕಾರಕ್ಕೆ ಬಂದ ಕೂಡಲೇ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಸಂಕಲ್ಪ ತೊಟ್ಟು ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದ್ದರು. ಮಾತ್ರವಲ್ಲ ಸರ್ಕಾರಿ ಕಾರನ್ನು ಬಳಸದೆ ತಮ್ಮ ಸ್ವಂತ ಕಾರನ್ನು ಬಳಸಿ ಇತರರಿಗೆ ಮಾದರಿಯಾಗಿದ್ದರು.
ಮುಖ್ಯಮಂತ್ರಿಯವರ ಮಾದರಿಯನ್ನು ಅನುಸರಿಸಬೇಕಾದ ಅಧಿಕಾರಿಗಳು ಮಾತ್ರ ದುಬಾರಿ ಕಾರುಗಳಿಗೆ ಬೇಡಿಕೆ ಇಟ್ಟು ಆರ್ಥಿಕ ಇಲಾಖೆಗೆ ಹಲವು ಪ್ರಸ್ತಾವನೆಗಳನ್ನು ಸಲ್ಲಿಸುತ್ತಲೇ ಬಂದಿದ್ದಾರೆ. ಇದೀಗ ಈ ಸಾಲಿಗೆ ಮತ್ತೊಂದು ಪ್ರಸ್ತಾಪ ಅಬಕಾರಿ ಇಲಾಖೆಯಿಂದ ಬಂದಿದೆ.
ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಒಟ್ಟು 8 ದುಬಾರಿ ಕಾರು ಖರೀದಿಗೆ ಒಪ್ಪಿಗೆ ನೀಡುವಂತೆ ಮನವಿ ಬಂದಿದೆ. ಆದರೆ ಇದನ್ನು ಪರಿಶೀಲಿಸಬೇಕಾದ ಆರ್ಥಿಕ ಇಲಾಖೆ ತಕ್ಷಣ ಒಪ್ಪಿಗೆಯನ್ನೂ ನೀಡಿದೆ.

ಹೊಸ ಕಾರುಗಳನ್ನು ಕೊಟ್ಟರೆ ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಲಿದ್ದಾರೆ. ಜೊತೆಗೆ ಅಬಕಾರಿ ಇಲಾಖೆ ಆದಾಯ ಹೆಚ್ಚಾಗಬೇಕಾದರೆ ಹೊಸ ಕಾರು ಬೇಕು ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. 8 ಹೊಸ ಕಾರುಗಳ ಖರೀದಿಗೆ ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದೆ.
ಸರ್ಕಾರದ ಆದಾಯವನ್ನು ಹೆಚ್ಚಿಸಬೇಕಾದರೆ ಹೊಸ ಕಾರು ಬೇಕೇ ಬೇಕು. ಹಾಗಾಗಿ ನಮಗೆ ಹೊಸ 8 ಎಕ್ಸ್ ಯುವಿ ಡಬ್ಲ್ಯು 4 ಎಫ್‍ಡಬ್ಲ್ಯುಡಿ ದುಬಾರಿ ಬೆಲೆಯ ಕಾರನ್ನು ಕೊಡಿಸಬೇಕು ಎಂದು ಅಬಕಾರಿಯ ಇಲಾಖೆಯ ಜಂಟಿ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ವಿಪರ್ಯಾಸ ಅಂದರೆ ಈ ಪ್ರಸ್ತಾವನೆಯನ್ನು ಪರಿಶೀಲಿಸಬೇಕಾಗಿದ್ದ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳು, ಅಬಕಾರಿ ಇಲಾಖೆ ಅಧಿಕಾರಿಗಳ ಬೇಡಿಕೆಗೆ ತಕ್ಷಣ ಒಪ್ಪಿಗೆ ಸೂಚಿಸಿದ್ದಾರೆ.

ಅಬಕಾರಿ ಇಲಾಖೆ ಕಳಹಿಸಿರುವ ಪತ್ರದಲ್ಲಿ ತಲಾ ಒಂದು ಕಾರಿಗೆ 10,64,187 ರೂ. ರಂತೆ ಒಟ್ಟು 8 ಎಕ್ಸ್ ಯುವಿ ಡಬ್ಲ್ಯು 4 ಎಫ್‍ಡಬ್ಲ್ಯುಡಿ ವಾಹಗಳ ಖರೀದಿಗಾಗಿ 85,13,496 ರೂ. ಗಳಂತೆ ಅನುಮೋದನೆ ನೀಡಬೇಕೆಂದು ಮನವಿ ಮಾಡಲಾಗಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಿತವ್ಯಯವಾಗಬೇಕೆಂದು ನಿರ್ದೇಶನ ನೀಡುತ್ತಿದ್ದಾರೆ. ಆದರೆ ಇನ್ನೊಂದು ದಿಕ್ಕಿನಲ್ಲಿ ಅಧಿಕಾರಿಗಳು ಹೊಸ ಹೊಸ ರೀತಿಯಲ್ಲಿ ದುಂದು ವೆಚ್ಚ ಮಾಡುತ್ತಿದ್ದಾರೆ. ಆದ್ದರಿಂದ ಸಿಎಂ ಅವರು ಯಾರು ಈ ದುಂದುವೆಚ್ಚ ಮಾಡುತ್ತಿದ್ದಾರೆ ಅವರಿಗೆ ಕಡಿವಾಣ ಹಾಕಬೇಕು. ಕಾರು ಖರೀದಿಸಲು ಹೋಗಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ನಮ್ಮದು ಮಿಥವ್ಯಯ ಸರ್ಕಾರ, ಇನ್ನು ಮುಂದೆ ಸರ್ಕಾರಿ ಅಧಿಕಾರಿಗಳು ದುಂದು ವೆಚ್ಚ ಮಾಡದೇ ಇರುವುದರಲ್ಲಿ ಆಡಳಿತ ನಡೆಸಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪದೇ ಪದೇ ಹೇಳಿಕೆ ನೀಡುತ್ತಿದ್ದರೂ ಅಧಿಕಾರಿಗಳು ಮಾತ್ರ ತಮ್ಮ ಹಳೆ ಚಾಳಿ ಮುಂದುವರಿಸುತ್ತಲೇ ಇದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ