ಪ್ರಧಾನಿ ಮೋದಿ ಹೃದಯದಲ್ಲಿ ದಲಿತರಿಗೆ ಸ್ಥಾನವಿದ್ದಿದ್ದರೆ ಅವರ ನೀತಿಗಳೇ ಬೇರೆ ಇರುತ್ತಿದ್ದವು: ರಾಹುಲ್ ವಾಗ್ದಾಳಿ

ನವದೆಹಲಿ:ಆ-9: ಎಸ್‌ಸಿ/ಎಸ್‌ಟಿ ಕಾಯ್ದೆಯನ್ನು ದುರ್ಬಲಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ದಲಿತ ಸಮುದಾಯವನ್ನು ಕಡೆಗಣಿಸಿದ್ದಾರೆ. ಮೋದಿ ಹೃದಯದಲ್ಲಿ ದಲಿತರಿಗೆ ಸ್ಥಾನವಿದ್ದಿದ್ದರೆ ದಲಿತರ ಕುರಿತ ಅವರ ನೀತಿಗಳೇ ಬೇರೆ ಇರುತ್ತಿದ್ದವು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಟೀಕಾಪ್ರಹಾರ ನಡೆಸಿದ್ದಾರೆ.

ದೆಹಲಿಯ ಜಂತರ್‌ ಮಂತರ್‌ನಲ್ಲಿ ವಿವಿಧ ದಲಿತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, ಸುಪ್ರೀಂ ಕೋರ್ಟ್‌ ಮೂಲಕ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ಕೇಂದ್ರ ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಹೃದಯದಲ್ಲಿ ದಲಿತರಿಗೆ ಯಾವುದೇ ಸ್ಥಾನವಿಲ್ಲ. ಸ್ಥಾನ ಇದ್ದಿದ್ದರೆ ದಲಿತರ ಬಗೆಗಿನ ನೀತಿಗಳು ಭಿನ್ನವಾಗಿರುತ್ತಿದ್ದವು ಎಂದು ವಾಗ್ದಾಳಿ ನಡೆಸಿದರು. ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ‘ದಲಿತನ್‌ ಕೊ ಸಫಾಯಿ ಕರ್ನೆ ಸೇ ಆನಂದ್‌ ಮಿಲ್ತಾ ಹೈ’ (‘Daliton ko safai karne se anand milta hai’) ಎಂದು ಪುಸ್ತಕದಲ್ಲಿ ಬರೆದಿದ್ದಾರೆ. ಇದು ಅವರ ಸಿದ್ಧಾಂತ ಎಂದು ಹೇಳಿದರು.

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ದಲಿತ ವಿರೋಧಿಗಳಾಗಿವೆ. ಬಿಜೆಪಿ ಸರ್ಕಾರ ಎಲ್ಲಾ ದಲಿತರನ್ನು ತುಳಿದು, ಹೊಸಕಿ ಹಾಕಿದೆ. 2019ರ ಚುನಾವಣೆಯಲ್ಲಿ ದೇಶದ ಜನರು ಬಿಜೆಪಿ ವಿರುದ್ಧವಾಗಿ ಮತ ಚಲಾಯಿಸುವ ಮೂಲಕ ಆ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

SC/ST bill,Rahul Gandhi, joins protest,PM Modi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ