ಕವಿ, ವಿಮರ್ಶಕ ಡಾ. ಸುಮತೀಂದ್ರ ನಾಡಿಗ ವಿಧಿವಶ

ಬೆಂಗಳೂರು, ಆ.7- ನವ್ಯ ಕವಿ, ಖ್ಯಾತ ವಿಮರ್ಶಕ ಹಾಗೂ ಕವಿ ಡಾ. ಸುಮತೀಂದ್ರ ನಾಡಿಗ ಅವರು ಇಂದು ವಿಧಿವಶರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಉಸಿರಾಟದ ತೊಂದರೆಯಿಂದ ನಗರದ ಬನ್ನೇರುಘಟ್ಟದ ಫೆÇೀರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು ಬೆಳಿಗ್ಗೆ 6:25ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಹೃದಯ, ಕಿಡ್ನಿ ಸಮಸ್ಯೆ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ನಾಡಿಗ ಅವರ ಮೃತದೇಹವನ್ನು ಕನಕಪುರ ರಸ್ತೆಯ ಮಾಯಾ ಇಂದ್ರಪ್ರಸ್ಥ ಅಪಾರ್ಟ್ ಮೆಂಟ್‍ನಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ.
ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷರು ಆಗಿರುವ ನಾಡಿಗ ಅವರು ಪತ್ನಿ ಮಾಲತಿ, ಇಬ್ಬರು ಪುತ್ರಿಯರಾದ ಸ್ವಪ್ನ, ರಶ್ಮಿ ಮತ್ತು ಪುತ್ರ ಅಪೂರ್ವ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಕನ್ನಡದ ಪ್ರಮುಖ ಕವಿ ಹಾಗೂ ಸಾಹಿತಿ ಆಗಿದ್ದ ಸುಮತೀಂದ್ರ ನಾಡಿಗ ಅವರು 1935 ಮೇ 4ರಂದು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಜನಿಸಿದ್ದರು. ತಂದೆ ರಾಘವೇಂದ್ರ, ತಾಯಿ ಸುಬ್ಬಮ್ಮ. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದ ಇವರು ಪ್ರವೃತ್ತಿಯಲ್ಲಿ ಕವಿ, ವಿಮರ್ಶಕ, ಕಾದಂಬರಿಕಾರ, ಲೇಖಕರಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯ ಮತ್ತು ಅಮೆರಿಕದ ಫಿಲಿಡೆಲ್ಫಿಯಾ ವಿಶ್ವವಿದ್ಯಾಲಯಗಳಿಂದ ಇಂಗ್ಲಿಷ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. 1985ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ.ಪದವಿ ಪಡೆದಿದ್ದರು. ಗೋವಾದಲ್ಲಿ ಕೆಲಕಾಲ ಅಧ್ಯಾಪಕರಾಗಿ, ಬಾಪೆÇ್ರೀ ಪ್ರಕಾಶನದ ಪ್ರಕಾಶನ ವಿಭಾಗದ ಸಂಪಾದಕರಾಗಿ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ನಾಡಿಗರು, ಡಾ. ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಕವನಗಳ ಕುರಿತು ಮಂಡಿಸಿದ ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿತ್ತು.
ಅಧ್ಯಾಪನ ವೃತ್ತಿಯಲ್ಲಿದ್ದುಕೊಂಡೇ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಸುಮತೀಂದ್ರ ನಾಡಿಗ ಅವರು ಕಾವ್ಯ, ಸಣ್ಣಕತೆ, ವಿಮರ್ಶೆ, ಅನುವಾದ ಮುಂತಾದ ಪ್ರಕಾರಗಳಲ್ಲಿಯೂ ಅಪಾರ ಸೇವೆ ಸಲ್ಲಿಸಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದಿನಕರ ಪ್ರತಿಷ್ಠಾನ ಪ್ರಶಸ್ತಿ, ವಿ.ಎಂ.ಇನಾಂದಾರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಸುಮತೀಂದ್ರ ನಾಡಿಗ ಬಾಜನರಾಗಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ