ಖ್ಯಾತ ನಿರ್ಮಾಪಕ ಎಂ ಭಕ್ತವತ್ಸಲಂ ವಿಧಿವಶ

 

ಬೆಂಗಳೂರು, ಆ.5- ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ, ವಿತರಕ, ಪ್ರದರ್ಶಕ ಎಂ. ಭಕ್ತವತ್ಸಲಂ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
1971ರಲ್ಲಿ ಸಂಪೂರ್ಣ ರಾಮಾಯಣ ಎಂಬ ಚಿತ್ರವನ್ನು ನಿರ್ಮಿಸಿದ್ದ ಭಕ್ತವತ್ಸಲಂ, ಎಂ. ಎಸ್.ಸತ್ಯು ನಿರ್ದೇಶಿಸಿ ಅನಂತ್‍ನಾಗ್, ಬಿ.ವಿ. ಕಾರಂತ್ ನಟಿಸಿದ್ದ ಕನ್ನೇಶ್ವರರಾಮ ಸೇರಿದಂತೆ ಹಲವಾರು ಸದಭಿರುಚಿ ಚಿತ್ರಗಳನ್ನು ನಿರ್ಮಿಸಿದ್ದರು.
ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿಯಲ್ಲಿ ಸುಮಾರು 7 ವರ್ಷಗಳ ಕಾಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಇವರು, ಸೌತ್ ಇಂಡಿಯಾನ್ ಫಿಲಂ ಚೇಂಬರ್ ಅಧ್ಯಕ್ಷ, ಫಿಲಂ ಫೆಡರೇಷನ್ ಇಂಡಿಯಾಗೆ ಆಯ್ಕೆಯಾದ ಅತ್ಯಂತ ಕಿರಿಯ ಅಧ್ಯಕ್ಷರಾಗಿದ್ದ ಭಕ್ತವತ್ಸಲಂ ತಮ್ಮ ಅಧಿಕಾರದ ಅವಧಿಯಲ್ಲಿ ಸಿನಿಮಾರಂಗಕ್ಕೆ ಗಣನೀಯ ಕೊಡುಗೆ ನೀಡಿದ್ದರು.
ಕನ್ನಡ ಚಿತ್ರಗಳಿಗೆ ಹೆಚ್ಚು ಪೆÇ್ರೀ ನೀಡುತ್ತಿದ್ದ ಭಕ್ತವತ್ಸಲಂ ಅವರು ಬೆಂಗಳೂರಿನಲ್ಲಿ ಶಾರದಾ, ಮಿನರ್ವ, ಲಾವಣ್ಯ ಹಾಗೂ ಮೈಸೂರಿನಲ್ಲಿ ಲಕ್ಷ್ಮೀ ಚಿತ್ರಮಂದಿರಗಳ ಮಾಲೀಕರಾಗಿದ್ದರು.
ಕನ್ನಡ ಚಿತ್ರರಂಗಕ್ಕೆ ಭಕ್ತವತ್ಸಲಂ ಅವರು ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ 2012ರಲ್ಲಿ ಡಾ.ರಾಜ್‍ಕುಮಾರ್ ಪ್ರಶಸ್ತಿಯೂ ಲಭಿಸಿತ್ತು.
ಚಿನ್ನೇಗೌಡ ಸಂತಾಪ:
ಭಕ್ತವತ್ಸಲಂ ಅವರ ನಿಧನದಿಂದ ಕನ್ನಡ ಚಿತ್ರರಂಗ ಒಬ್ಬ ಶ್ರೇಷ್ಠ ನಿರ್ಮಾಪಕರನ್ನು ಕಳೆದುಕೊಂಡಂತಾಗಿದೆ. ಅವರು ಉತ್ತಮ ಆಡಳಿತಗಾರರೂ ಆಗಿದ್ದರು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ಅವರು ಸಂತಾಪ ಸೂಚಿಸಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು, ನಿರ್ಮಾಪಕ, ವಿತರಕ, ಪ್ರದರ್ಶಕ ವಲಯದವರು, ಕಲಾವಿದರು, ತಂತ್ರಜ್ಞರು ಭಕ್ತವತ್ಸವಂ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ