ಅಖಂಡ ಕರ್ನಾಟಕಕ್ಕಾಗಿ ವಾಟಾಳ್ ಮೆರವಣಿಗೆ

ಬೆಂಗಳೂರು, ಜು.31-ಅನೇಕ ಮಹನೀಯರ ತ್ಯಾಗದ ಫಲವಾಗಿ ಕರ್ನಾಟಕ ಏಕೀಕರಣವಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಒಡೆಯಬಾರದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.

ಅಖಂಡ ಕರ್ನಾಟಕ ಒಂದೇ ಎಂಬ ಘೋಷವಾಕ್ಯದಡಿ ಚಿನ್ನದ ರಥದಲ್ಲಿ ಅಖಂಡ ಕರ್ನಾಟಕದ ಭೂಪಟ ಹಾಗೂ ಕನ್ನಡ ತಾಯಿ ಭುವನೇಶ್ವರಿ ಚಿತ್ರಪಟವನ್ನಿಟ್ಟು ಮೈಸೂರು ಬ್ಯಾಂಕ್ ವೃತ್ತದಿಂದ ಕೆಂಪೇಗೌಡ ಬಸ್ ನಿಲ್ದಾಣದವರೆಗೆ ಮೆರವಣಿಗೆ ಮಾಡುವ ಮೂಲಕ ಅಖಂಡ ಕರ್ನಾಟಕಕ್ಕೆ ವಾಟಾಳ್ ಬೆಂಬಲ ಸೂಚಿಸಿದರು.

ಉತ್ತರ ಕರ್ನಾಟಕ-ಹೈದರಾಬಾದ್ ಕರ್ನಾಟಕ ದ ಅಭಿವೃದ್ಧಿಗೆ 100ಕ್ಕೆ ನೂರರಷ್ಟು ನಮ್ಮ ಹೋರಾಟ ಇದ್ದೇ ಇರುತ್ತದೆ. ಪ್ರತ್ಯೇಕ ಕರ್ನಾಟಕಕ್ಕೆ ನಾವು ಬೆಂಬಲ ನೀಡುವುದಿಲ್ಲ. ತಕ್ಷಣ ತುರ್ತು ಶಾಸನಸಭೆ ಕರೆದು 1956 ರಿಂದ ಇಲ್ಲಿಯವರೆಗಿನ ಸಮಗ್ರ ಮಾಹಿತಿಯುಳ್ಳ ಶ್ವೇತಪತ್ರವನ್ನು ಮಂಡಿಸಬೇಕು ಎಂದು ಆಗ್ರಹಿಸಿದರು.

ಶಾಸನಸಭೆಯಲ್ಲಿ ಡಾ.ನಂಜುಂಡಪ್ಪ ವರದಿ ಬಗ್ಗೆ ಚರ್ಚೆ ಮಾಡಬೇಕು ಎಂದು ಸಲಹೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ