‘ಸಂಜು’ ಚಿತ್ರಕ್ಕೆ ಕಂಟಕ, ಚಿತ್ರ ತಯಾರಕರಿಗೆ ಪಾತಕಿ ಅಬುಸಲೇಂ ನೋಟಿಸ್!

ಮುಂಬೈ: ಖ್ಯಾತ ಬಾಲಿವುಡ್ ನಟ ಸಂಜಯ್ ದತ್ ಜೀವನಾಧಾರಿತ ಚಿತ್ರ ‘ಸಂಜು’ ಚಿತ್ರಕ್ಕೆ ಕಂಟಕ ಎದುರಾಗಿದ್ದು, ಚಿತ್ರದಲ್ಲಿ ತನ್ನ ಬಗ್ಗೆ ಸುಳ್ಳು ಮಾಹಿತಿ ನೀಡಲಾಗಿದೆ ಎಂದು ಭೂಗತ ಪಾತಕಿ ಮತ್ತು ಕುಖ್ಯಾತ ಗ್ಯಾಂಗ್ ಸ್ಟರ್ ಅಬುಸಲೇಂ ಆರೋಪಿಸಿದ್ದಾನೆ.

ಮುಂಬೈ ಸರಣಿ ಬಾಂಬ್ ಸ್ಫೋಟ ಮತ್ತು ಅಕ್ರಮ ಶಸ್ತ್ರಾಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿರುವ ಅಬುಸಲೇಂ ಸುಂಜು ಚಿತ್ರ ತಯಾರಕರಿಗೆ ತನ್ನ ವಕೀಲರ ಮೂಲಕ ನೋಟಿಸ್ ನೀಡಿದ್ದಾನೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ನಟ ಸಂಜಯ್ ದತ್ ಜೀವನಾಧಾರಿತ ಚಿತ್ರ ಸಂಜು ನಲ್ಲಿ ತನ್ನ ಬಗ್ಗೆ ಸುಳ್ಳು ಮಾಹಿತಿಗಳನ್ನು ನೀಡಲಾಗಿದೆ. ಚಿತ್ರದಲ್ಲಿನ ಸುಂಜು ಪಾತ್ರವನ್ನು ವೈಭವೀಕರಿಸಲು ತನ್ನ ಪಾತ್ರದ ಅವಹೇಳನ ಮಾಡಲಾಗಿದೆ. ಹೀಗಾಗಿ ಕೂಡಲೇ ಚಿತ್ರ ತಂಡ ಬಹಿರಂಗ ಕ್ಷಮೆ ಕೋರಬೇಕು. ಇಲ್ಲವಾದಲ್ಲಿ ಮಾನನಷ್ಟ ಮೊಕದ್ದಮೆ ಹೇರಲಾಗುತ್ತದೆ ಎಂದು ಅಬು ಸಲೇಂ ನೋಟಿಸ್ ನಲ್ಲಿ ಎಚ್ಚರಿಕೆ ನೀಡಿದ್ದಾನೆ ಎನ್ನಲಾಗಿದೆ.

ಅಂತೆಯೇ ಈ ಬಗ್ಗೆ ಉತ್ತರಿಸಲು ಚಿತ್ರ ತಂಡಕ್ಕೆ 15 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ.

ಇನ್ನು ನಟ ರಣಬೀರ್ ಕಪೂರ್ ಅಭಿನಯದ ಸಂಜು ಚಿತ್ರ ಖ್ಯಾತ ಬಾಲಿವುಡ್ ನಟ ಸಂಜಯ್ ದತ್ ಜೀವನಾಧಾರಿತ ಚಿತ್ರವಾಗಿದ್ದು, ನಟ ಸಂಜಯ್ ದತ್ ಅವರ ವೈಯುಕ್ತಿಕ ಜೀವನ, ಸಿನಿಮಾ ವೃತ್ತಿ ಜೀವನ, ಅವರ ಗೆಳತಿಯರು ಮತ್ತು ಜೈಲು ವಾಸಗಳ ಕುರಿತು ಸಂಜು ಚಿತ್ರದಲ್ಲಿ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಅಂತೆಯೇ ಮುಂಬೈ ಸರಣಿ ಸ್ಫೋಟ ಮತ್ತು ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪಕ್ಕೆ ಸಂಬಂಧಿಸಿದಂತೆ ಸಂಜಯ್ ದತ್ ಜೈಲು ಶಿಕ್ಷೆ ಅನುಭವಿಸಿದ್ದರು. ಇದೂ ಕೂಡ ಚಿತ್ರದಲ್ಲಿ ಮೂಡಿಬಂದಿದ್ದು, ಚಿತ್ರದಲ್ಲಿ ಕೆಲ ಗ್ಯಾಂಗ್ ಸ್ಟರ್ ಗಳ ಪಾತ್ರಗಳೂ ಕೂಡ ಉಲ್ಲೇಖವಾಗಿದೆ ಎನ್ನಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ