ಚುಂಚನಕಟ್ಟೆ ಜಲಪಾತೋತ್ಸವ

ಮೈಸೂರು,ಜು.26-ಚುಂಚನಕಟ್ಟೆಯಲ್ಲಿ ಆಗಸ್ಟ್ 11ರಂದು ನಡೆಯಲಿರುವ ಜಲಪಾತೋತ್ಸವವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಾತ್ರಿ ಜಿಲ್ಲಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಚುಂಚನಕಟ್ಟೆ, ಭರಚುಕ್ಕಿ-ಗಗನಚುಕ್ಕಿಯಲ್ಲಿ ಜಲಪಾತೋತ್ಸವ ಆಚರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಚುಂಚನಕಟ್ಟೆಯಲ್ಲಿ ಆ.11 ಮತ್ತು 12ರಂದು, ಭರಚಿಕ್ಕಿಯಲ್ಲಿ 18-19ರಂದು ಹಾಗೂ ಗಗನಚುಕ್ಕಿಯಲ್ಲಿ25-26ರಂದು ಜಲಪಾತೋತ್ಸವ ಆಚರಿಸಲು ನಿರ್ಧರಿಸಲಾಗಿದೆ.
ಜಲಪಾತೋತ್ಸವ ವೀಕ್ಷಿಸಲು ಮುಖ್ಯಮಂತ್ರಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಎಲೆಮರೆ ಕಾಯಿಯಂತೆ ಇರುವ ಪ್ರತಿಭಾನ್ವಿತರನ್ನು ಗುರುತಿಸಿ ಅವರಿಗೂ ಸಹ ಉತ್ಸವದಲ್ಲಿ ಅವಕಾಶ ಕಲ್ಪಿಸಿಕೊಡಲು ತೀರ್ಮಾನಿಸಲಾಯಿತು.
ಈ ಕಾರ್ಯಕ್ರಮವು ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವುದರಿಂದ ಹಳ್ಳಿಯ ಅಭಿವೃದ್ದಿಗೆ ತಕ್ಕಂತೆ ಉಡುಗೆ-ತೊಡುಗೆ ಬಗ್ಗೆ ಆಯೋಜಕರು ಗಮನಹರಿಸಬೇಕು. ಈ ಮೂರು ಕಡೆ ನಡೆಯುವ ಜಲಪಾತೋತ್ಸವ ದಿನಗಳಂದು ರಾತ್ರಿ 11 ಗಂಟೆವರೆಗೂ ಗಸ್ತು ಹೆಚ್ಚಿಸಬೇಕೆಂದು ಸೂಚಿಸಿದರು.
ಕಾರ್ಯಕ್ರಮಕ್ಕೆ ಹೊರಗಿನ ಕಲಾವಿದರನ್ನು ಕರೆಯುವ ಬದಲಾಗಿ ಸ್ಥಳೀಯ ಕಲಾವಿದರಿಗೆ, ಜಾನಪದ ಕಲಾ ತಂಡಗಳಿಗೆ ಅವಕಾಶ ಕಲ್ಪಿಸಬೇಕು. ಪ್ರವಾಸಿ ತಾಣಗಳನ್ನು ಹೆಚ್ಚಾಗಿ ಬಿಂಬಿಸಬೇಕು ಎಂದರು.
ಈ ಸಭೆಯಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಮು, ಜಿಪಂ ಸಿಇಒ ಶಿವಶಂಕರ್, ಅಪರ ಪೆÇಲೀಸ್ ಅಧೀಕ್ಷಕ ಅರುಣಾಂಗೂ ಗಿರಿ, ಅಪರ ಜಿಲ್ಲಾಧಿಕಾರಿ ಯೋಗೀಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ