ಪ್ರತಿಭಟಿಸುವುದನ್ನು ಬಿಟ್ಟರೆ ನಮಗೆ ಬೇರೆ ಮಾರ್ಗವಿಲ್ಲ: ಟಿಡಿಪಿ

ನವದೆಹಲಿ:ಜು-೨೩: ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಕುರಿತು ಮತ್ತೆ ಮಾತನಾಡಿರುವ ಟಿಡಿಪಿ ಸಂಸದ ಜಯದೇವ ಗಲ್ಲಾ ಅವರು, ನಮ್ಮ ಬೇಡಿಕೆಗಳಿಗೆ ಪ್ರಧಾನಿ ಮೋದಿ ಕ್ಯಾರೆ ಎನ್ನುತ್ತಿಲ್ಲ; ಪ್ರತಿಭಟಿಸುವುದು ಬಿಟ್ಟರೆ ನಮಗೆ ಬೇರಾವುದೇ ದಾರಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಜೆಟ್ ಅಧಿವೇಶನದ ವೇಳೆ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದೆವು. ಆದರೆ, ಅದು ಸಾಧ್ಯವಾಗಲಿಲ್ಲ. ಮುಂಗಾರು ಅಧಿವೇಶನದಲ್ಲಿ ಕೊನೆಗೂ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದೆವು. ಆದರೆ, ಪ್ರಧಾನಿ ಮೋದಿ ನಮ್ಮ ಯಾವುದೇ ಪ್ರಶ್ನೆಗಳಿಗೂ ಕ್ಯಾರೆ ಎನ್ನಲ್ಲಿಲ್ಲ. ಈ ಹಿಂದೆ ನೀಡಿದ್ದ ಹೇಳಿಕೆಗಳನ್ನೇ ಮತ್ತೆ ಕೇಳಿದೆವು. ಯಾವ ಬದಲಾವಣೆಗಳೂ ಆಗಲಿಲ್ಲ. ಪ್ರತಿಭಟಿಸುವುದು ಬಿಟ್ಟರೆ ನಮಗೆ ಬೇರಾವುದೇ ದಾರಿಯಿಲ್ಲ ಎಂದು ಹೇಳಿದರು.

ಗೋ ರಕ್ಷಕರಿಗೆ ರಾಜಸ್ಥಾನ ಪೊಲೀಸರೇ ಬೆಂಬಲ: ಅಸಾದುದ್ದೀನ್ ಓವೈಸಿ

ಈ ವೇಳೆ ಮಾತನಾಡಿದ ಅಸಾದುದ್ದೀನ್ ಓವೈಸಿ, ಗೋ ರಕ್ಷಕರಿಗೆ ರಾಜಸ್ಥಾನ ಪೊಲೀಸರೇ ಬೆಂಬಲ ನೀಡುತ್ತಿದ್ದಾರೆ. ಪೊಲೀಸರ ಕ್ರಮಗಳನ್ನು ನೋಡುತ್ತಿದ್ದರೆ ನನಗೆ ಆಶ್ಚರ್ಯವಾಗುತ್ತಿದೆ. ತಿಲುಖಾನ್ ಕೊಲೆ ಪ್ರಕರಣದಲ್ಲೂ ಇದೇ ರೀತಿ ವರ್ತಿಸಿದ್ದರು. ಗೋರಕ್ಷಕರೂ ಹಾಗೂ ರಾಜ್ಯ ಪೊಲೀಸರು ಕೈಜೋಡಿಸಿದ್ದಾರೆಂದು ಆರೋಪಿಸಿದರು.

ಇದೇ ವೇಳೆ ದೇಶದಲ್ಲಿ ಅತ್ಯಾಚಾರ ಪ್ರಕಣಗಳು ಹೆಚ್ಚುತ್ತಿವೆ ಎಂಬ ಎನ್’ಸಿಆರ್’ಬಿ ವರದಿಯನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಸಂಸದ ಜ್ಯೋತಿರಾಧಿತ್ಯ ಸಿನ್ಹಾ ಅವರು, ದೇಶದಲ್ಲಿ ಈ ವರೆಗೂ 40,000 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಕೆಲ ಅತ್ಯಾಚಾರ ಪ್ರಕರಣಗಳಲ್ಲಿ ಬಿಜೆಪಿ ನಾಯಕರೂ ಕೂಡ ಭಾಗಿಯಾಗಿರುವುದು ವರದಿಯಾಗಿವೆ ಎಂದರು. ಈ ವೇಳೆ ಕಾಂಗ್ರೆಸ್ ನಾಯಕರು ಆಡಳಿತಾರೂಢ ಸರ್ಕಾರದ ವಿರುದ್ಧ ಘೋಷಣಾ ವಾಕ್ಯಗಳನ್ನು ಕೂಗಲು ಆರಂಭಿಸಿದರು.

ಈ ವೇಳೆ ಮಾತನಾಡಿದ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು, ಅತ್ಯಾಚಾರ ಪ್ರಕರಣಗಳಲ್ಲಿ ರಾಜಕೀಯ ಮಾಡಬೇಡಿ. ನಾನೂ ಕೂಡ ಒಂದು ಹೆಣ್ಣು ಎಂದು ಹೇಳಿದರು.

lok sabha,TDP,MP Jayadev Galla,asaduddin owaisi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ