ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಸಾವು ದಿನಕ್ಕೊಂದು ತಿರುವು

ಉಡುಪಿ, ಜು.22- ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ದಿನದಿಂದ ದಿನಕ್ಕೆ ಹೊಸ ತಿರುವುಗಳು ದೊರೆಯುತ್ತಿದ್ದು, ನಿನ್ನೆಯಷ್ಟೇ ತನಿಖಾ ತಂಡ ಮಹಿಳೆಯೊಬ್ಬರನ್ನು ವಿಚಾರಣೆ ನಡೆಸಿದ ಬೆನ್ನಲ್ಲೇ ಮಠದಲ್ಲಿ ಬಾಟಲಿಯೊಂದು ಸಿಕ್ಕಿದ್ದು, ಅದರಲ್ಲಿ ವಿಷವಿತ್ತು ಎಂಬ ವದಂತಿ ಹಬ್ಬಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಾಟಲಿಯ ಚಿತ್ರ ವೈರಲ್ ಆಗಿದ್ದು, ಪೆÇಲೀಸರು ವಿಚಾರಣೆ ನಡೆಸಿದ ಮಹಿಳೆ ಸ್ವಾಮೀಜಿಯವರಿಗೆ ಗೋಡಂಬಿ ಜ್ಯೂಸ್ ಎಂದು ನಂಬಿಸಿ ಕುಡಿಸಿದ್ದರು ಎಂದು ಹೇಳಲಾಗುತ್ತಿದೆ.
ಮಾರಿಂಜಿಲ್ ಎಂಬ ಹೆಸರಿನ ಪಾನೀಯದ ಬಾಟಲಿ ಅದಾಗಿದ್ದು, ಅದು ಶಕ್ತಿವರ್ಧಕ ಪಾನೀಯ ಎಂದು ಹೇಳಲಾಗುತ್ತಿದೆ. ಸ್ವಾಮೀಜಿಯವರು ಮಹಿಳೆಯಿಂದ ತರಿಸಿಕೊಂಡು ಈ ಪಾನೀಯ ಕುಡಿಯುತ್ತಿದ್ದರು ಎನ್ನುವ ಸಂಶಯ ವ್ಯಕ್ತವಾಗಿದ್ದು, ತನಿಖಾ ತಂಡಗಳು ಈ ಬಗ್ಗೆಯೂ ತನಿಖೆ ಕೈಗೊಂಡಿವೆ.
ಐವರ ಸಮಿತಿ ರಚನೆ:
ಈ ಮಧ್ಯೆ ಶಿರೂರು ಮಠದ ಆಡಳಿತ ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಲು ಐವರು ಸದಸ್ಯರ ಸಮಿತಿ ರಚನೆಯ ಹೊಣೆಯನ್ನು ಸೋದೆ ಮಠದ ವಿಶ್ವವಲ್ಲಭ ಸ್ವಾಮೀಜಿಯವರಿಗೆ ವಹಿಸಲಾಗಿದೆ. ಆಷಾಢದ ಬಳಿಕ ಮಠಕ್ಕೆ ಉತ್ತರಾಧಿಕಾರಿ ನೇಮಕವಾಗುವ ಸಾಧ್ಯತೆ ಇದೆ. ಸದ್ಯ ಮಠದ ಜವಾಬ್ದಾರಿಯನ್ನು ಸೋದೆ ಶ್ರೀ ನೋಡಿಕೊಳ್ಳುತ್ತಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ